ರಾಯಚೂರು: ರಾಷ್ಟ್ರಕ್ಕೆ ಅವಮಾನ ಮಾಡುವವರು ಹೇಗೆ ರೈತರಾಗುತ್ತಾರೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸ್ನನ ತೀರ್ಥ ಸ್ವಾಮಿ ಪ್ರಶ್ನಿಸಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಶ್ರೀಗಳು ದೆಹಲಿಯಲ್ಲಿ ರೈತರ ಹೆಸರಿನಲ್ಲಿ ಹೋರಾಟ ನಡೆಯುತ್ತಿದೆ. ಅವರು ರೈತರೇ ಅಲ್ಲ, ರೈತರು ಹೊಲದಲ್ಲಿ ದುಡಿಯುತ್ತಿದ್ದಾರೆ ಎಂದರು. ರಾಷ್ಟ್ರ ಧ್ವಜಕ್ಕೆ ಅವಮಾನ, ಖಲಿಸ್ತಾನದ ಪರವಾಗಿ ಘೋಷಣೆ ಮಾಡಿದವರು ಹೇಗೆ ರೈತರಾಗುತ್ತಾರೆ. ರಾಷ್ಟ್ರಕ್ಕೆ ಅವಮಾನ ಮಾಡುವವರು ಹೇಗೆ ರೈತರಾಗುತ್ತಾರೆ ಅಂತ ಪ್ರಶ್ನಿಸಿದರು.
ಪ್ರಚಾರಕ್ಕಾಗಿ ದೇವರು, ಧರ್ಮದ ಬಗ್ಗೆ ಮಾತನಾಡಬಾರದು, ಚಿಂತಕ ಕೆ ಎಸ್ ಭಗವಾನ್ ಪ್ರಚೋದನಕಾರಿ ಮಾತನಾಡಿದ್ದು ತಪ್ಪು ಕೋರ್ಟಿನಲ್ಲಿ ಮಸಿ ಬಳಿದದ್ದು ಸಹ ತಪ್ಪು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸ್ನನ ತೀರ್ಥ ಸ್ವಾಮಿ ಹೇಳಿದರು.
ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಬೃಹತ್ ಯಂತ್ರಗಳು, ಶಿಲೆಗಳಿವೆ ಹೀಗಾಗಿ ವೀಕ್ಷಣೆಗೆ ಅವಕಾಶ ಮೊದಲಿನಿಂದಲೂ ನೀಡಿಲ್ಲ. ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನ ಕೆಲವು ಕಡೆ ಮುಗಿದಿದೆ. ಸದ್ಯ 500 ಕೋಟಿಗೂ ಅಧಿಕ ನಿಧಿ ಸಂಗ್ರಹಣೆ ಆಗಿದೆ. ನಿಧಿ ಸಂಗ್ರಹಣೆ ಅಭಿಯಾನ ಇನ್ನೂ 15 ದಿನಗಳ ಕಾಲ ಮುಂದುವರೆಯಲಿದೆ. ಹಣ ನೀಡುವವರು ಸಹಾಯ ಮಾಡಬಹುದು ಎಂದರು.
ರಾಮ ಮಂದಿರ ನಿರ್ಮಾಣ ಸಂಸ್ಕøತಿಯ ಪುನರುತ್ಥಾನದ ಪ್ರತೀಕವಾಗಿದೆ. ನಮ್ಮ ಸನಾತನ ಸಂಸ್ಕøತಿಯೂ ಮಂದಿರದ ನಿರ್ಮಾಣದ ಜೊತೆಗೆ ಪುನರ್ ನಿರ್ಮಾಣ ಆಗಬೇಕು. ರಾಜ್ಯದಲ್ಲಿ ಮೀಸಲಾತಿಗಾಗಿ ಹೋರಾಟ ನಡೆದಿವೆ, ಜಾತಿವಾರು ಮೀಸಲಾತಿಗಿಂತ ಆರ್ಥಿಕ ಮೀಸಲಾತಿ ನೀಡಬೇಕು. ಜಾತಿವಾರು ಮೀಸಲಾತಿ ಕೇಳುವುದು ತಪ್ಪು ಅಂತ ಪೇಜಾವರ ಮಠದ ವಿಶ್ವಪ್ರಸ್ನನ ತೀರ್ಥ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.