ಚಿಕ್ಕಮಗಳೂರು: ಇಡೀ ರಾಷ್ಟ್ರದ ಮಹಾಮಂತ್ರಿ ಇರೋದು ನಮ್ಮ ಜಿಲ್ಲೆಯಲ್ಲಿ. ಅವರಿಂದ ಇಡೀ ಜಿಲ್ಲೆಯಲ್ಲಿ ಏನು ಬೇಕಾದರೂ ಆಗಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಗ್ಗೆ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಹಾಡಿ ಹೊಗಳಿದ್ದಾರೆ.
ಕಡೂರು ತಾಲೂಕಿನ ಸಖರಾಯಪಟ್ಟಣದ ಐತಿಹಾಸಿಕ ಅಯ್ಯನಕೆರೆ ಕೆರೆಗೆ ಬಾಗಿಣ ಅರ್ಪಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಬೆಳ್ಳಿ ಪ್ರಕಾಶ್ ಅವರು, ಇಡೀ ರಾಷ್ಟ್ರದ ಮಹಾಮಂತ್ರಿ ಇರೋದೆ ನಮ್ಮ ಜಿಲ್ಲೆಯಲ್ಲಿ. ಆ ಮಹಾಮಂತ್ರಿ ಜಿಲ್ಲೆ, ರಾಜ್ಯ, ರಾಷ್ಟ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಯೋಚನೆ ಮಾಡುತ್ತಾರೆ. ಸಿ.ಟಿ.ರವಿ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿದ್ದಾರೆ. ಅವರ ವಿಶೇಷ ಪ್ರಯತ್ನದಿಂದ ಜಿಲ್ಲೆಯಲ್ಲಿ ಏನು ಬೇಕಾದರೂ ಆಗಬಹುದು ಅನ್ನೋ ಸನ್ನಿವೇಶ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬಾರ್ ಬೇಕು, ಬೇಡ -ಡಿಸಿ ಕಚೇರಿ ಮುಂದೆ ಮಹಿಳೆಯರು, ಪುರುಷರ ಹೈಡ್ರಾಮಾ
ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಬಲಿಷ್ಠ ಜಿಲ್ಲೆಯಾಗುತ್ತಿದೆ. ಸಂಪುಟ ರಚಿಸುವಾಗ ಚಿಕ್ಕಮಗಳೂರು ಜಿಲ್ಲೆಯನ್ನು ಕಡೆಗಣಿಸಿಲ್ಲ. ನಾನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಿದ್ದೇನೆ. ತರೀಕೆರೆ ಶಾಸಕ ಡಿ.ಎಸ್. ಸುರೇಶ್ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ಎಂ.ಕೆ. ಪ್ರಾಣೇಶ್ ವಿಧಾನ ಪರಿಷತ್ ಉಪ ಸಭಾಪತಿಗಳಾಗಿದ್ದಾರೆ. ಮೂಡಿಗೆರೆ ಶಾಸಕ ಕುಮಾರಸ್ವಾಮಿಗೂ ಅಧಿಕಾರ ಸಿಗುತ್ತದೆ. ಸಚಿವ ಸಂಪುಟ ರಚನೆ ವೇಳೆ ಸಹಜವಾಗಿ ಕೆಲವರಿಗೆ ಅಸಮಾಧಾನ ಆಗಿದೆ. ಅವರೆಲ್ಲರನ್ನು ಸಮಾಧಾನ ಮಾಡುವ ಶಕ್ತಿ ಪಕ್ಷ ಹಾಗೂ ಮುಖ್ಯಮಂತ್ರಿಗಳಿಗಿದೆ. ಚಿಕ್ಕಮಗಳೂರು ಜಿಲ್ಲೆಗೆ ಸಂಪುಟದಲ್ಲಿ ಅನ್ಯಾಯವಾಗಿಲ್ಲ ಎಂದು ಬೆಳ್ಳಿ ಪ್ರಕಾಶ್ ಪಕ್ಷವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.