– ಪಕ್ಷದ ಸದಸ್ಯರೆಲ್ಲರೂ ರಾಮ, ಕೃಷ್ಣನ ಭಕ್ತರು
ಲಕ್ನೋ: ಸಮಾಜವಾದಿ ಪಕ್ಷದ ಮುಖಂಡ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರಾಮ ತಮ್ಮ ಪಕ್ಷಕ್ಕೆ ಸೇರಿದವನು. ಅಲ್ಲದೆ ಪಕ್ಷದ ಸದಸ್ಯರೆಲ್ಲರೂ ರಾಮನ ಭಕ್ತರು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಅಯೋಧ್ಯೆಯಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ಕುಟುಂಬಸ್ಥರ ಜೊತೆ ಅಯೋಧ್ಯೆಗೆ ಭೇಟಿ ನೀಡುತ್ತೇನೆ. ಪಕ್ಷದ ಅನುಭವದಂತೆ ದೊಡ್ಡ ಪಕ್ಷಗಳೊಂದಿಗೆ ಸೇರುವುದು ಒಳ್ಳೆಯದಲ್ಲ. ಹೀಗಾಗಿ ಮುಂದಿನ ವಿಧಾಸಭಾ ಚುನಾವಣೆಯಲ್ಲಿ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವನು. ನಾವೆಲ್ಲರೂ ರಾಮ, ಕೃಷ್ಣನ ಭಕ್ತರು. ಈ ಹಿಂದೆ ನಾವು ಸರಯು ನದಿಯ ತಟದಲ್ಲಿ ದೀಪೋತ್ಸವ ಹಾಗೂ ಭಜನಾ ಸ್ಥಳದಲ್ಲಿ ಸೌಂಡ್ ಸಿಸ್ಟ್ ಮ್ ಹಾಕಿಸಿರುವುದಾಗಿ ಅವರು ಹೇಳಿದರು. ಅಲ್ಲದೆ ಕಾರ್ಯಕರ್ತರ ಸಭೆಯಲ್ಲಿ ತಮ್ಮ ಆಡಳಿತಾವಧಿಯಲ್ಲಿನ ಅಭಿವೃದ್ಧಿ ಯೋಜನೆಗಳು ಕುರಿತು ಮೆಲುಕು ಹಾಕಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎಸ್ಪಿ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ. ದೊಡ್ಡ ಪಕ್ಷಗಳೊಂದಿಗಿನ ನಮ್ಮ ಅನುಭವ ಸರಿಯಾಗಿಲ್ಲ. ಅಲ್ಲದೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ ನಮ್ಮ ಪಕ್ಷ 351 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ 2022ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.