ರಾಮನಗರ ಜಿಲ್ಲಾಸ್ಪತ್ರೆಯಲ್ಲಿ 300 ಆಕ್ಸಿಜನ್ ಬೆಡ್ ವ್ಯವಸ್ಥೆ: ಡಿಸಿಎಂ

Public TV
3 Min Read
rmg dcm

– ಆಕ್ಸಿಜನ್, ರೆಮ್‍ಡಿಸಿವರ್ ಕೊರತೆ ಇಲ್ಲ

ರಾಮನಗರ: ನೂತನ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗಾಗಿ ಮೊದಲ ಹಂತದಲ್ಲಿ 150 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ನಾಳೆಯಿಂದಲೇ ಈ ಬೆಡ್ ಗಳ ಬಳಕೆಯನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.

ಜಿಲ್ಲಾಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈಗ 150 ಹಾಸಿಗೆ ವ್ಯವಸ್ಥೆ ಮಾಡಲಾಗಿದ್ದು, ಎರಡನೇ ಹಂತದಲ್ಲಿ, ಅಂದರೆ 15 ದಿನಗಳಲ್ಲಿ ಇನ್ನೂ 150 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಅಲ್ಲಿಗೆ ಒಟ್ಟು 300 ಆಕ್ಸಿಜನ್ ಬೆಡ್‍ಗಳಾಗುತ್ತವೆ ಎಂದರು.

corona virus 3

ಈಗಾಗಲೇ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ತಡೆಗೆ ಎಲ್ಲ ಕ್ರಮ ವಹಿಸಲಾಗಿದೆ. ಎರಡನೇ ಅಲೆ ಹಾಗೂ ಸಂಭವನೀಯ ಮೂರನೇ ಅಲೆ ಬಂದರೂ ಸಮಸ್ಯೆಯಾಗದಂತೆ ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಆಕ್ಸಿಜನ್ ಬೆಡ್‍ಗಳನ್ನು ಹಾಕಲಾಗುತ್ತಿದೆ. ಕಂದಾಯ ಭವನದಲ್ಲಿ ಈಗ 35 ಆಕ್ಸಿಜನ್ ಬೆಡ್ ಇದ್ದು, ಅಲ್ಲಿ ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ಯಾವುದೇ ತುರ್ತು ಸಂದರ್ಭ ಎದುರಾದರೂ ಜಿಲ್ಲಾ ಕೇಂದ್ರದಲ್ಲೇ ಚಿಕಿತ್ಸೆ ನೀಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

ಹೋಮ್ ಐಸೋಲೇಷನ್ ಇಲ್ಲ
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಇನ್ನು ಮುಂದೆ ಕೋವಿಡ್ ಸೋಂಕಿತರನ್ನು ಮನೆಯಲ್ಲಿ ಕ್ವಾರಂಟೈನ್ ಮಾಡುವುದಿಲ್ಲ. ಸೋಂಕು ಪತ್ತೆಯಾದ ತಕ್ಷಣ ಅವರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ಶಿಫ್ಟ್ ಮಾಡಿ ಆರೈಕೆ ಮಾಡಲಾಗುವುದು. ಅಲ್ಲಿ ವೈದ್ಯರು, ನರ್ಸ್‍ಗಳು ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿ ಇರುತ್ತಾರೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

corona virus 1

ಜಿಲ್ಲಾ ಕೇಂದ್ರದಲ್ಲಿ ಆಮ್ಲಜನಕದ ಕೊರತೆ ಇಲ್ಲ. ಈಗಾಗಲೇ 6.8 ಟನ್ ಸಾಮಥ್ರ್ಯದ ಆಕ್ಸಿಜನ್ ಘಟಕ ಮಂಜೂರಾಗಿದೆ. ಸದ್ಯಕ್ಕೆ 3.5 ಕೆ.ಎಲ್‍ನಷ್ಟು ಆಮ್ಲಜನಕ ಬಳಕೆಯಾಗುತ್ತಿದೆ. ಇದರ ಜೊತೆಗೆ ಆಮ್ಲಜನಕ ಸಾಂದ್ರಕಗಳು, ಹೆಚ್ಚುವರಿ ಸಿಲಿಂಡರ್‍ಗಳೂ ನಮ್ಮಲ್ಲಿವೆ. ಹೀಗಾಗಿ ಎಲ್ಲೂ ಕೊರತೆ ಎಂಬುದಿಲ್ಲ ಎಂದರು ಅವರು.

ರಾಜ್ಯದಲ್ಲಿ ಒಟ್ಟು 60,000 ಆಕ್ಸಿಜನ್ ಬೆಡ್‍ಗಳಿದ್ದು, ಅದರಲ್ಲಿ ಅರ್ಧದಷ್ಟು ಬೆಡ್‍ಗಳು ಬೆಂಗಳೂರು ನಗರದಲ್ಲೇ ಇವೆ. ಇನ್ನೂ ಎಲ್ಲ ತಾಲೂಕು, ಜಿಲ್ಲಾ ಆಸ್ಪತ್ರೆ ಸೇರಿ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ರಾಮನಗರ ಜಿಲ್ಲೆಯಲ್ಲೂ ಯಾವುದೇ ಸಮಸ್ಯೆ ಇಲ್ಲ. ಅದೇ ರೀತಿ ರೆಮ್‍ಡಿಸಿವರ್ ಸೇರಿ ಯಾವ ಔಷಧದ ಕೊರತೆಯೂ ಇಲ್ಲ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.

corona 2 1

ಪಿಎಚ್ ಸಿಗಳಿಗೆ ಭೇಟಿ
ರಾಮನಗರದ ಕಂದಾಯ ಭವನದಲ್ಲಿನ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಡಿಸಿಎಂ ಅವರು ಅಲ್ಲಿನ ಚಿಕಿತ್ಸೆ ಬಗ್ಗೆ ಸಿಬ್ಬಂದಿ ಜೊತೆ ಮಾತನಾಡಿ ಚಿಕಿತ್ಸಾ ವ್ಯವಸ್ಥೆ, ಔಷಧಿ ಇತ್ಯಾದಿ ಬಗ್ಗೆ ಮಾಹಿತಿ ಪಡೆದರು. ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಲಭ್ಯತೆ ಬಗ್ಗೆಯೂ ಮಾಹಿತಿ ಪಡೆದರು. ಬಳಿಕ ರಾಮನಗರ ತಾಲೂಕಿನ ಕಣ್ವ ಪ್ರಾಥಮಿಕ ಆರೋಗ್ಯ ಹಾಗೂ ಸುಗ್ಗನಹಳ್ಳಿಯಲ್ಲಿ ಇರುವ ಆಯುಷ್ ತರಬೇತಿ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಸುಗ್ಗನಹಳ್ಳಿಯಲ್ಲಿ ಕೋವಿಡ್ ಸೋಂಕಿತರಿದ್ದು, ಅವರು ಚಿಕಿತ್ಸೆ ಬಗ್ಗೆ ಸ್ಥಳೀಯ ವೈದ್ಯರಿಂದ ಮಾಹಿತಿ ಪಡೆದರು. ರೋಗಿಗಳ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಜತೆಯೂ ಮಾತನಾಡಿದರು.

corona

ಸುಗ್ಗನಹಳ್ಳಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಸೋಂಕಿತರ ಜತೆಗೂ ಮಾತನಾಡಿದ ಡಿಸಿಎಂ, ಊಟ- ಉಪಚಾರದ ಬಗ್ಗೆ ವಿಚಾರಿಸಿದರು. ಎಲ್ಲರೂ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಸಿಇಒ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್, ಉಪ ಮುಖ್ಯಮಂತ್ರಿ ಅವರ ಆಪ್ತ ಕಾರ್ಯದರ್ಶಿ ಸತೀಶ್ ಕುಮಾರ್, ಡಿಎಚ್‍ಒ ಡಾ.ನಿರಂಜನ್ ಹಾಗೂ ಇತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *