ಬೆಂಗಳೂರು: ಲಂಡನ್ ನಲ್ಲಿ ರೂಪಾಂತರಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದಂತೆಯೇ ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಬೆನ್ನಲ್ಲೇ ಸರ್ಕಾರದ ವಿರುದ್ಧ ಅನೇಕ ಟೀಕೆಗಳು ಬಂದವು. ಈ ಟೀಕೆಗಳಿಗೆ ಆರೋಗ್ಯ ಸಚಿವ ಖಡಕ್ ಉತ್ತರ ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ವಿರೋಧ ಪಕ್ಷಗಳು ಯಾವತ್ತು ವಿರೋಧ ಮಾಡಿಲ್ಲ ಹೇಳಿ. ಆರಂಭದಿಂದಲು ಸಹಕಾರ ಕೊಡುತ್ತಿದ್ದೀವಿ ಅಂತ ವಿರೋಧ ಮಾಡುತ್ತಲೇ ಬಂದಿದ್ದಾರೆ. ಬೆಂಬಲ ಕೊಡ್ತಾರೆ ಅನ್ನೋ ನಂಬಿಕೆ ಕೂಡ ಇಲ್ಲ ಎಂದು ಗರಂ ಆದರು.
ರಾತ್ರಿ ಮಾತ್ರ ಬರುತ್ತೆ ಅಂತ ಸರ್ಕಾರಕ್ಕೆ ಅಷ್ಟೇನು ಜ್ಞಾನ ಇಲ್ಲದಿಲ್ಲ. ಆದರೆ ಯುಕೆ ಯಲ್ಲಿ ಯಶಸ್ವಿಯಾಗಿದೆ. ಪಾರ್ಟಿ ಮೋಜು-ಮಸ್ತಿ ನಿಯಂತ್ರಣವಾಗಬೇಕು. ಜೊತೆಗೆ ಆರ್ಥಿಕ ಸ್ಥಿತಿಗತಿಯ ಬಗ್ಗೆಯೂ ನೋಡಬೇಕು. ಅವುಗಳನ್ನು ಯೋಚನೆ ಮಾಡಿಯೇ 11 ಗಂಟೆಗೆ ತಂದಿರುವುದು. ವ್ಯಾಪಾರಿಗಳು ಒಂದು ದಿನದ ಅವಕಾಶ ಕೇಳಿದ್ರು. ಕರ್ಫ್ಯೂ ಗೆ ತಯಾರಿ ಮಾಡಿಕೊಳ್ಳಲು ಸಮಯ ಕೇಳಿದ್ರು. ಹಾಗಾಗಿ ನಿನ್ನೆಯ ಕರ್ಫ್ಯೂ ಇಂದು ರಾತ್ರಿಗೆ ಬದಲಿಸಲಾಗಿದೆ ಎಂದು ತಿಳಿಸಿದರು.
ರಾತ್ರಿ ಪಾರ್ಟಿ ಹೊಸ ವರ್ಷ ಆಚರಣೆ ಎಲ್ಲವನ್ನು ನಿಲ್ಲಿಸಬೇಕಿದೆ. ಬಹಳ ಯೋಚನೆ ಮಾಡಿ ವಿವೇಚನೆಯಿಂದಲೆ ಈ ನೈಟ್ ಕರ್ಫ್ಯೂ ಜಾರಿ ಮಾಡಿದ್ದೇವೆ. ಹೇಳುವವರು ಜಾರಿ ಮಾಡಿದರೂ ಹೇಳ್ತಾರೆ ಮಾಡದಿದ್ದರೂ ಹೇಳ್ತಾರೆ. ನೀವು ಹೇಳ್ತಿರಾ, ವಿರೋಧ ಪಕ್ಷದವರು ಕೂಡ ಹೇಳ್ತಾರೆ ಎಂದರು.
ಮುಖ್ಯಮಂತ್ರಿಗಳು ಹೇಳಿದ್ದಾರೆ, ಜನವರಿ 1 ರಿಂದ ಶಾಲೆ ಆರಂಭದಲ್ಲಿ ಯಾವುದೆ ಬದಲಾವಣೆ ಇಲ್ಲ. ಆದರೆ ಇಂಗ್ಲೆಂಡ್ ನಿಂದ ಬಂದವರಲ್ಲಿ ರೂಪಾಂತರ ವೈರೆಸ್ ಕಂಡು ಬಂದರೆ 28-29 ರ ಹಾಗೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಶಾಲೆ ಆರಂಭದ ಬಗ್ಗೆಯೂ ಸ್ಪಷ್ಟನೆ ನೀಡಿದರು.
ಇಂದು 300-400 ಜನರ ಆರ್ಟಿಪಿಸಿಆರ್ ರಿಪೋರ್ಟ್ ಬರಲಿದೆ. 11-12 ಗಂಟೆ ವೇಳೆಗೆ ಇದರ ರಿಪೋರ್ಟ್ ಬರುತ್ತದೆ. ಎಲ್ಲರ ಪರೀಕ್ಷೆ ಮಾಡುತ್ತಿದ್ದೇವೆ ಎಂದರು. ಇನ್ನು ಮಾರ್ಕೆಟ್ ಗಳಲ್ಲಿ ಅಂತರದ ನಿಯಮ ಪಾಲನೆ ಕಡ್ಡಾಯ. ಜನರು ತಾವೇ ತಿಳಿದುಕೊಂಡು ಈ ಬಗ್ಗೆ ಎಚ್ಚರ ವಹಿಸಬೇಕು. ಕಟ್ಟುನಿಟ್ಟಾಗಿ ಮಾರ್ಕೆಟ್ ನಿಯಮಗಳ ಪಾಲನೆ ಆಗುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಬಿಬಿಎಂಪಿ ಆಯುಕ್ತರ ಬಳಿ ಮಾತನಾಡ್ತೀನಿ ಎಂದು ಹೇಳಿದರು.