ಬೆಂಗಳೂರು: ಜೂನ್ 16ರಂದು ನಡೆಯಲಿರುವ ರಾಜ್ಯ ಸಭೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಮಾಜಿ ಪ್ರಧಾನಿ ದೇವೇಗೌಡರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಇಂದು ಈ ವಿಚಾರವಾಗಿ ಜೆಪಿ ಭವನದಲ್ಲಿ ಜೆಡಿಎಸ್ ಪಕ್ಷದ ಶಾಸಂಗದ ಸಭೆ ನಡೆಸಲಾಗಿತ್ತು. ಈ ಸಭೆಯ ಬಳಿಕ ಮಾತನಾಡಿದ ಕುಮಾರಸ್ವಾಮಿ, ರಾಜ್ಯಸಭೆ ಚುನಾವಣೆ ಜೆಡಿಎಸ್ ಅಭ್ಯರ್ಥಿಯಾಗಿ ದೇವೇಗೌಡ ಸ್ಪರ್ಧೆ ಮಾಡಲಿದ್ದಾರೆ. ರಾಷ್ಟ್ರಕ್ಕೆ ಅವರ ಸೇವೆ ಅವಶ್ಯಕತೆ ಇದೆ. ಹೀಗಾಗಿ ಅವರು ಸ್ಪರ್ಧೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದರು.
ಸಭೆಯಲ್ಲಿ ಬೇರೆ ಪಕ್ಷದಿಂದ ಬೆಂಬಲ ಪಡೆಯಬೇಕು ಎಂಬ ಚರ್ಚೆ ಆಗಿಲ್ಲ. ಪಕ್ಷಾತೀತವಾಗಿ ದೇವೇಗೌಡರಿಗೆ ಬೆಂಬಲ ಸಿಗುತ್ತೆ ಎಂಬ ನಂಬಿಕೆ ಇದೆ. ದೇಶಕ್ಕೆ ದೇವೇಗೌಡರ ಸೇವೆ ಅವಶ್ಯಕತೆ ಇದೆ. ಹೀಗಾಗಿ ಅವರು ಸ್ಪರ್ಧೆ ಮಾಡುವಂತೆ ನಾವು ಒಮ್ಮತದಿಂದ ಆಯ್ಕೆ ಮಾಡಿದ್ದೇವೆ. ಇದರಲ್ಲಿ ಕುಟುಂಬ ರಾಜಕೀಯದ ಪ್ರಶ್ನೆ ಇಲ್ಲ ಎಂದು ಕುಮಾರಸ್ವಾಮಿ ದೇವೇಗೌಡರ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದೇ ವೇಳೆ ಮಾತನಾಡಿದ ಹಿರಿಯ ನಾಯಕ ಬಸವರಾಜು ಹೊರಟ್ಟಿ, ಇವತ್ತು ಕೇವಲ ರಾಜ್ಯಸಭೆ ಬಗ್ಗೆ ಮಾತ್ರ ಚರ್ಚೆ ಆಗಿದೆ. ವಿಧಾನ ಪರಿಷತ್ ಚುನಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಇಂದಿನ ಸಭೆಯಲ್ಲಿ ರಾಜ್ಯಸಭೆಗೆ ದೇವೇಗೌಡರೇ ಸೂಕ್ತ ಎಂದು ನಾವು ಅವರನ್ನು ಒಮ್ಮತದಿಂದ ಆಯ್ಕೆ ಮಾಡಿದ್ದೇವೆ ಎಂದು ಹೇಳಿದರು.
ಎಚ್ಡಿಡಿ ಅಯ್ಕೆ ಆಗ್ತಾರಾ?
ರಾಜ್ಯಸಭೆಗೆ ಆಯ್ಕೆ ಆಗಬೇಕಾದರೆ ಅಭ್ಯರ್ಥಿಗೆ 45 ಮತಗಳ ಅಗತ್ಯವಿದೆ. ಸದ್ಯ ಜೆಡಿಎಸ್ ಬಳಿ 34 ಮತಗಳಿವೆ. ದೇವೇಗೌಡರು ಆಯ್ಕೆ ಆಗಬೇಕಾದರೆ ಹೆಚ್ಚುವರಿ 12 ಮತಗಳ ಬೇಕಾಗುತ್ತದೆ. ಕಾಂಗ್ರೆಸ್ ಬೆಂಬಲ ನೀಡಿದರೆ ದೇವೇಗೌಡರು ಜಯಗಳಿಸಬಹುದು. ಈ ವೇಳೆ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಇಳಿಸಲು ಮುಂದಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ. ಮೂರನೇ ಅಭ್ಯರ್ಥಿ ಇಳಿಸಿದರೆ ಸ್ಪರ್ಧೆ ಜೋರಾಗಲಿದೆ. ಇದನ್ನು ಓದಿ: ಎಚ್ಡಿಡಿ ಸ್ಪರ್ಧೆ ಬಗ್ಗೆ ನಮ್ಮೊಂದಿಗೆ ಯಾರೂ ಚರ್ಚಿಸಿಲ್ಲ- ಡಿಕೆಶಿ
ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಬಲ 68. ಒಬ್ಬರು ಅಭ್ಯರ್ಥಿ ಆಯ್ಕೆಯಾಗುವುದಕ್ಕೆ 45 ಮತಗಳು ಸಾಕು. ಆದ್ದರಿಂದ ಮಲ್ಲಿಕಾರ್ಜುನ ಖರ್ಗೆ ಸುಲಭವಾಗಿ ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್ ಬಳಿ 23 ಹೆಚ್ಚುವರಿ ಮತಗಳಿದ್ದು, ಜೆಡಿಎಸ್ ಬಳಿ 34 ಮತಗಳಿವೆ. ಈ ಎರಡೂ ಪಕ್ಷಗಳ ಒಟ್ಟು 54 ಮತಗಳನ್ನು ಜೆಡಿಎಸ್ಗೆ ನೀಡಿದರೆ ದೇವೇಗೌಡ ಅವರು ಗೆಲ್ಲಲಿದ್ದಾರೆ.