ಹಾಸನ: ರಾಜ್ಯವಷ್ಟೇ ಅಲ್ಲ ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಶ್ರೀ ಕ್ಷೇತ್ರ ಕೋಡಿಮಠದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಜೊತೆಗೆ ಜಾಗತಿಕ ಮಟ್ಟದಲ್ಲಿಯೂ ಕೂಡ ಬದಲಾವಣೆಯ ಸಾಧ್ಯತೆ ಇದೆ. ಇದಕ್ಕೆಲ್ಲ ಕಾರಣ ಈಗ ಬಂದಿರುವ ಗ್ರಹಣಗಳ ಸಂಕೇತವೇ ಸಾಕ್ಷಿಯಾಗಿದೆ ಎಂದರು.
ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಭವಿಷ್ಯ ಗೋಚರವಾಗಿರುವ ಪ್ರಕಾರ ನನ್ನ ಕಣ್ಣ ಮುಂದೆ ನೀರು ಕಾಣುತ್ತಿದೆ. ಅಂದರೆ ಅಕಾಲಿಕ ಮಳೆ ಅನಾಹುತಗಳ ಆಗುವ ಸಾಧ್ಯತೆ ಇದೆ. ಯಾವಾಗ ಬೇಕಾದರೂ ಮಳೆ ಆಗುವ ಸಂಭವವಿದೆ. ಕೊರೊನಾ ರೂಪಾಂತರ ಬಗ್ಗೆ ನಾನು ಎರಡು ತಿಂಗಳ ಹಿಂದೆಯೇ ಹೇಳಿದ್ದೆ. ಕೊರೊನಾ ಎಂಬ ಹೆಮ್ಮಾರಿ ಸಂಪೂರ್ಣವಾಗಿ ಹೋಗಲು ಇನ್ನೂ 10 ವರ್ಷ ಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಭೂಮಿ ನಿಸ್ಸಾರಗೊಂಡಿದೆ ಅಂದರೆ ಅದರ ಸತ್ವವನ್ನು ಕಳೆದುಕೊಳ್ಳುತ್ತಿದೆ. ಈಗಿನ ಔಷಧಿಗಳು ಮನುಷ್ಯನ ಆರೋಗ್ಯಕ್ಕೆ ಮಾರಕವಾಗಲಿದೆ. ಪ್ರತಿ ಕೃಷಿ ಚಟುವಟಿಕೆಗಳಿಗೂ ರಾಸಾಯನಿಕ ಔಷಧಿಗಳನ್ನು ಹಾಕುತ್ತಿರುವುದು ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಮತ್ತೊಂದು ಕಾರಣ. ಯಂತ್ರಗಳು ಭೂಮಿಗೆ ಎಷ್ಟು ಮಲ ಸುರಿಸುತ್ತವೆ. ಗೋವುಗಳ ಮಲಮೂತ್ರದಿಂದ ಬೆಳೆದ ಆಹಾರ ರಾಸಾಯನಿಕ ಮುಕ್ತವಾಗಿದ್ದು, ಅದು ಮಾತ್ರ ಮನುಷ್ಯನನ್ನು ಕಾಪಾಡಬಲ್ಲದು, ಇಲ್ಲದಿದ್ದರೆ ಮತ್ತೊಂದು ಮಾರಣಾಂತಿಕ ಕಾಯಿಲೆ ಬಂದರೂ ಬರಬಹುದು ಎಂದು ಆಂತಕವಾಗಿಯೇ ನುಡಿದರು.
ಅರಸ ಪ್ರಜಾ ವಿರೋಧಿ ಕಾಯ್ದೆ ತರುತ್ತಾನೆಂದು ಪ್ರಜೆ ವಿರೋಧ ಮಾಡಿ ಅರಸನ ಸಿಂಹಾಸನಕ್ಕೆ ತೊಂದರೆ ಕೊಡುತ್ತಾನೆ ಎಂದು ಹಿಂದೆಯೇ ಹೇಳಿದ್ದೆ. ಅದರಂತೆ ರೈತ ವಿರೋಧಿ ಕಾಯ್ದೆ ಜಾರಿ ಮಾಡಲು ಆಗುತ್ತಲೇ ಇಲ್ಲ ಎಂದು ತಮ್ಮ ಭವಿಷ್ಯವಾಣಿಯನ್ನು ಸಮರ್ಥನೆ ಮಾಡಿಕೊಂಡರು.