ಬೆಂಗಳೂರು: ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿದ ಎಲ್ಲ ರೈತರಿಗೆ 5 ಸಾವಿರ ರೂ. ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಣಯವನ್ನು ತೆಗೆದುಕೊಂಡಿದೆ.
ಮೊದಲಿಗೆ ಮೆಕ್ಕೆಜೋಳ ಬೆಳೆದ ರೈತರಿಗೆ ಮಾತ್ರ ಸರ್ಕಾರ ಪರಿಹಾರ ಘೋಷಿಸಿತ್ತು. ಈ ಘೋಷಣೆಗೆ ಇನ್ನುಳಿದ ರೈತರು ಆಕ್ರೋಶ ಹೊರಹಾಕಿದ್ದರು. ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ, ಎಲ್ಲ ರೈತರಿಗೂ ಪರಿಹಾರವಾಗಿ 5 ಸಾವಿರ ರೂ. ಸಿಗಲಿದೆ. ಪರಿಹಾರ ನೀಡುವಲ್ಲಿ ಹಿಂಗಾರು-ಮುಂಗಾರು ನಿಯಮಗಳು ಅನ್ವಯಿಸಲ್ಲ ಎಂದು ತಿಳಿಸಿದ್ರು.
ಕ್ಷೌರಿಕರು, ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಐದು ಸಾವಿರ ರೂ ಪರಿಹಾರ ನೀಡಲು ವಿಧಿಸಲಾಗಿದ್ದ ಷರತ್ತುಗಳನ್ನು ಸಡಿಲಿಸಲಾಗಿದೆ. ಎಲ್ಲ ಚಾಲಕರಿಗೂ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಹೊರ ರಾಜ್ಯಗಳಿಂದ ಬಂದಿರುವವರ ಟೆಸ್ಟ್ ಹಾಗೂ ಕ್ವಾರಂಟೈನ್ ಅವಧಿ ಮುಗಿಯುವವರೆಗೆ ಮತ್ತೆ ಬೇರೆಯವರಿಗೆ ರಾಜ್ಯ ಪ್ರವೇಶಕ್ಕೆ ಅವಕಾಶವಿಲ್ಲ. ಹಂತ ಹಂತವಾಗಿ ಎಲ್ಲರನ್ನು ಕರೆಸಿಕೊಳ್ಳಲಾಗುತ್ತೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯದಿಂದ ಬರುವ ವ್ಯಕ್ತಿಗಳಿಗೆ ಇನ್ನು ಮುಂದೆ ಕರ್ನಾಟಕಕ್ಕೆ ಪ್ರವೇಶ ನೀಡದಿರಲು ಸರ್ಕಾರ ಮುಂದಾಗಿದೆ. ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಐದು ರಾಜ್ಯಗಳಿಂದ ಬರುವ ವ್ಯಕ್ತಿಗಳಿಗೆ 15 ದಿನಗಳ ಕಾಲ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ. ರಸ್ತೆ, ರೈಲು ಮಾರ್ಗದ ಮೂಲಕ ಬರುವಂತಿಲ್ಲ. ಅಷ್ಟೇ ಅಲ್ಲದೇ ಈ ರಾಜ್ಯಕ್ಕೆ ವಿಮಾನ ಸೇವೆ ಸಹ ನೀಡದೇ ಇರಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.