ಬೆಂಗಳೂರು: ದೆಹಲಿಯ ಗಡಿ ಭಾಗದಲ್ಲಿ ರೈತರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ರಾಜ್ಯದ ಅನ್ನದಾತರು ಸಿಡಿದೆದ್ದಿದ್ದಾರೆ. ರಾಜ್ಯದಲ್ಲಿ ಹೆದ್ದಾರಿಗಳನ್ನ ತಡೆಯುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಂಘಟನೆಗಳು ಮುಂದಾಗಿದ್ರೆ, ರಸ್ತೆ ತಡೆಯದಂತೆ ಪೊಲೀಸರು ಬಂದೋಬಸ್ತ್ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಇಂದು ಮಧ್ಯಾಹ್ನ 12 ರಿಂದ ಮೂರು ಗಂಟೆಗಳ ಕಾಲ ಹೆದ್ದಾರಿ ತಡೆಯಲು ಪ್ಲಾನ್ ಮಾಡಿಕೊಂಡಿವೆ. ಈ ನಡುವೆ ಹೆದ್ದಾರಿ ತಡೆಯದಂತೆ ಬೆಂಗಳೂರು ಪೊಲೀಸ್ ಆಯುಕ್ತರು ಎಲ್ಲಾ ಡಿಸಿಪಿಗಳಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಖಾಕಿ ಸಜ್ಜು: ಬೆಂಗಳೂರು ನಗರದ ಹೊರಭಾಗದಲ್ಲಿ ಹೆಚ್ಚಿನ ಪೊಲೀಸರನ್ನ ನಿಯೋಜಿಸುವುದು. ತುಮಕೂರು ರಸ್ತೆ, ಮೈಸೂರು ರಸ್ತೆ, ದೇವನಹಳ್ಳಿ, ಕೆರ ಆರ್ ಪುರಂ ರಸ್ತೆಯಲ್ಲಿ ಡಿಸಿಪಿಗಳು ಖುದ್ದು ಹಾಜರಿದ್ದು ಪರಿಸ್ಥಿತಿ ನಿಭಾಯಿಸಬೇಕು. ರೈತ ಸಂಘಟನೆಗಳು ರಸ್ತೆಗೆ ಉಳಿಯದಂತೆ ಅವರ ಮನವೊಲಿಸಬೇಕು. ಮಾತಿಗೆ ಬಗ್ಗದೆ ರಸ್ತೆಯಲ್ಲಿ ಕುಳಿತ್ರೆ, ಸಂದರ್ಭಕ್ಕೆ ಸರಿಯಾಗಿ ತೀರ್ಮಾನ ಕೈಗೊಳ್ಳಬೇಕು. ಜಾಸ್ತಿ ಹೊತ್ತು ಯಾರನ್ನು ರಸ್ತೆ ತಡೆಯದಂತೆ ನೋಡಿಕೊಳ್ಳಬೇಕು. ರಸ್ತೆ ತಡೆದಿದ್ದೇ ಆದಲ್ಲಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು. ವಶಕ್ಕೆ ಪಡೆದವರನ್ನ ಪ್ರತಿಭಟನಾ ಸ್ಥಳದಿಂದ ಶಿಫ್ಟ್ ಮಾಡಲು ಸಾರಿಗೆ ಬಸ್ ಗಳನ್ನ ಬಳಸುವಂತೆ ಪೊಲೀಸ್ ಆಯುಕ್ತರು ನಿರ್ದೇಶನ ನೀಡಿದ್ದಾರೆ.
ಎಲ್ಲ ಜಿಲ್ಲೆಗಳಲ್ಲೂ ಕೂಡ ಕ್ರಮ ವಹಿಸುವಂತೆ ಎಲ್ಲಾ ಎಸ್ಪಿ ಮತ್ತು ಐಜಿಪಿಗಳಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಎಸ್ ಪಿ ಖುದ್ದು ಹಾಜರಿರಬೇಕು. ಡಿಎಆರ್ ಸಿಬ್ಬಂದಿಯನ್ನು ಪ್ರತಿಭಟನಾ ಸ್ಥಳದಲ್ಲಿ ನಿಯೋಜಿಸಿರಬೇಕು. ಪ್ರತಿಭಟನೆ ಆರಂಭಿಸಿದ್ರೆ ಸಾಧ್ಯವಾದಷ್ಟು ಸರ್ವಿಸ್ ರಸ್ತೆಯಲ್ಲಿ ಅವಕಾಶ ಮಾಡಿಕೊಡಬೇಕು. ರಸ್ತೆ ತಡೆಗೆ ಅವಕಾಶ ಮಾಡಿಕೊಡಬಾರದು, ಸಂದರ್ಭಕ್ಕೆ ತಕ್ಕ ತೀರ್ಮಾನ ಎಸ್ಪಿ ಗಳು ಕೈಗೊಳ್ಳಬೇಕು. ರಸ್ತೆ ತಡೆ ನಡೆಸಿದ್ರೆ, ವಾಹನ ಸವಾರರಿಗೆ ಬೇರೆ ರೂಟ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದಾರೆ.