ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಬಯಸಿದ್ದೆ. ಇಂದು ಸಿಎಂ ಬದಲಾವಣೆ ಆಗಿದ್ದರಿಂದಲೇ ಗಡ್ಡ ತೆಗೆದಿದ್ದೇನೆ ಎಂದು ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
ಶಾಸಕಾಂಗ ಸಭೆ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ನಾವು ಹೇಳಿದಂತೆ ಬದಲಾವಣೆ ಆಗಿದೆ. ಯಾರು ಅನ್ನೋದು ಇಲ್ಲಿ ಮುಖ್ಯವಲ್ಲ. ಬಸವರಾಜ ಬೊಮ್ಮಾಯಿ ಬಿಜೆಪಿ ಹೈಕಮಾಂಡ್ ನ ಸರ್ವಸಮ್ಮತದ ಆಯ್ಕೆ. ಬೊಮ್ಮಾಯಿ ಅವರನ್ನೇ ಸಿಎಂ ಮಾಡಬೇಕು ಅಂತ ಹೈಕಮಾಂಡ್ ಸೂಚನೆ ನೀಡಿತ್ತು. ನಾವು ಎಲ್ಲ ಶಾಸಕರು ಬೊಮ್ಮಾಯಿ ಅವರ ಆಯ್ಕೆಯನ್ನು ಒಪ್ಪಿಕೊಂಡಿದ್ದೇವೆ ಎಂದು ಹೇಳಿದರು.
ಇದೇ ವೇಳೆ ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಯತ್ನಾಳ್, ಯಾವುದೇ ಒಬ್ಬ ನಾಯಕನನ್ನು ಸಂಪೂರ್ಣವಾಗಿ ವಿರೋಧ ಹಾಕಿಕೊಳ್ಳಬಾರದು ಎಂದು ಹೈಕಮಾಂಡ್ ಅಂದುಕೊಂಡಿರಬಹುದು. ಹಾಗಾಗಿಯೇ ಅವರ ಆಪ್ತನನ್ನು ಸೂಚಿಸಿರಬಹುದು. ಇಲ್ಲಿ ಯಡಿಯೂರಪ್ಪನವರ ಶಕ್ತಿ ಪ್ರದರ್ಶನವಾಗಿಲ್ಲ. ನಾಯಕತ್ವವೇ ಬದಲು ಮಾಡಿದ ನಂತರ ಸಹಮತದ ನಾಯಕ ಇರಲಿ ಅಂತ ಬೊಮ್ಮಾಯಿ ಅವರನ್ನ ಆಯ್ಕೆ ಮಾಡಲಾಗಿದೆ ಎಂದು ಹೇಳುವ ಮೂಲಕ ಸಣ್ಣದಾದ ಅಸಮಾಧಾನ ಹೊರ ಹಾಕಿದರು. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಆಯ್ಕೆಗೆ ಕಾರಣಗಳೇನು?
ಧನ್ಯವಾದ ಸಲ್ಲಿಸಿದ ಬೊಮ್ಮಾಯಿ: ನಾನು ಎಲ್ಲರನ್ನು ಒಗ್ಗೂಡಿಸಿಕೊಂಡು, ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಜನಪರ ಆಡಳಿತ ನೀಡುತ್ತೇನೆ ಎಂದರು. ರಾಜ್ಯದಲ್ಲಿ ಕೋವಿಡ್ ಸಂಕಷ್ಟ ಮತ್ತು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಹರಿಸುವ ಕೆಲಸ ಮಾಡುತ್ತೇನೆ. ಹೈಕಮಾಂಡ್ ಯಾವುದೇ ಷರತ್ತು ವಿಧಿಸಿಲ್ಲ. ಯಡಿಯೂರಪ್ಪನವರ ನಿರೀಕ್ಷೆಗಳನ್ನು ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.