ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಅಥವಾ ಸೆಮಿ ಲಾಕ್ಡೌನ್ ಇಲ್ಲ ಎಂದು ಸಚಿವ ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸ್ಥಿತಿಗಳನ್ನು ಅವಲೋಕನ ಮಾಡಿ ಕೆಲವೊಂದು ನಿರ್ಣಯಗಳನ್ನು ನಿನ್ನೆ ಪ್ರಸ್ತಾಪ ಮಾಡಿದ್ದಾರೆ. ಮಹಾರಾಷ್ಟ್ರ ಹಾಗೂ ಕೇರಳ ಗಡಿ ಭಾಗಗಳಿಂದ ಬರುವ ಜನರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇಲ್ಲದವರನ್ನು ಕಡ್ಡಾಯವಾಗಿ ಒಳಗಡೆ ಬಿಡದಂತೆ ಸೂಚಿಸಲಾಗಿದ್ದು, ಸ್ಥಳದಲ್ಲೇ ಪರೀಕ್ಷೆ ಮಾಡುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.

ಮದುವೆ ಸಮಾರಂಭಗಳಲ್ಲಿ ನಿಗದಿಯಾದ ಮಿತಿಗಿಂತ ಜನ ಸೇರುವಂತಿಲ್ಲ. ಒಂದು ವೇಳೆ ಈ ರೂಲ್ಸ್ ಪಾಲೋ ಮಾಡದಿದ್ದರೆ ಮಾರ್ಷಲ್ ಗಳನ್ನು ಕಳುಹಿಸಲಾಗುವುದು ಅಲ್ಲದೆ ದಂಡ ಕೂಡ ವಿಧಿಸಲಾಗುತ್ತದೆ. ಸಮಾರಂಭದ ಆಯೋಜಕರು ಹಾಗೂ ಸ್ಥಳದ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸುಧಾಕರ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಲಾಕ್ಡೌನ್ ಮಾಡುವ ಪರಿಸ್ಥಿತಿ ಬಂದಿಲ್ಲ. ಹೀಗಾಗಿ ಸೆಮಿ ಲಾಕ್ ಡೌನ್ ಅಥವಾ ಲಾಕ್ ಡೌನ್ ಮಾಡಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.


