ಉಡುಪಿ: ರಾಜ್ಯದಲ್ಲಿ ಮೋದಿ ಮಾದರಿಯ ಆಡಳಿತ ಬೇಕು. ಸಿಎಂ ಬದಲಾವಣೆ ಕುರಿತಾಗಿ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ ಬೆಳವಣಿಗೆಗಳ ಬಗ್ಗೆ ನಾನು ನನ್ನ ಅಭಿಪ್ರಾಯ ಹೇಳುವುದಿಲ್ಲ. ಮಾಧ್ಯಮಗಳಿಗೆ ಸದ್ಯ ಯಾವುದೇ ಹೇಳಿಕೆ ಕೊಡುವುದಿಲ್ಲ ಎಂದು ಸರ್ಕಾರದ ಮುಖ್ಯ ಸಚೇತಕ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪಕ್ಷದ ತೀರ್ಮಾನವನ್ನು ಚಾಚುತಪ್ಪದೇ ಪಾಲಿಸುತ್ತೇನೆ. ನಾನು ಯಾರ ಪರವೂ ಇಲ್ಲ, ನಾವು ಯಾರ ವಿರುದ್ಧ ಇಲ್ಲ. ರಾಜ್ಯದಲ್ಲಿ ನಮಗೆ ಮೋದಿ ಮಾದರಿಯ ಆಡಳಿತ ಬೇಕು. ಮೋದಿ ಮಾದರಿಯಲ್ಲಿ ಶಾಸಕನಾಗಿ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ ಎಂದರು.
ಎಲ್ಲ ಶಾಸಕರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಚೇತಕನಾಗಿ ಹೇಳಲು ಬಯಸುತ್ತೇನೆ. ಭಾರತೀಯ ಜನತಾ ಪಕ್ಷದ ನಿಲುವಿಗೆ, ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಯಾರ ನಾಯಕತ್ವ ಬೇಕು, ಬೇಡ ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸುನಿಲ್ ಕುಮಾರ್ ಹೇಳಿದರು.