ಚಿಕ್ಕಬಳ್ಳಾಪುರ: ಸೋಂಕಿತರ ಸಂಖ್ಯೆ ಎಷ್ಟೇ ಆದರು ಸರ್ಕಾರ ನಿಭಾಯಿಸುತ್ತಿದೆ. ಆದರೆ ಮತ್ತೆ ಲಾಕ್ಡೌನ್ ಮಾಡುವ ಪ್ರಶ್ನೆಯೇ ಉದ್ಭವಿಸಲ್ಲ ಎಮದು ಚಿಕ್ಕಬಳ್ಳಾಪುರ ತಾಲೂಕು ಮುದ್ದೇನಹಳ್ಳಿ ಗ್ರಾಮದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಮುದ್ದೇನಹಳ್ಳಿ ಸತ್ಯ ಸಾಯಿ ವಿದ್ಯಾಸಂಸ್ಥೆಗೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಮ್ಮೆಲೆ ಸ್ಪೈಕ್ ಆದ ಕಾರಣ ಕೊರೊನಾ ಸೋಂಕಿತರಿಗೆ ಬೆಡ್ ಸಮಸ್ಯೆ ಆಯಿತು. ಆದರೆ ಈಗ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಿ ಬೆಡ್ ಕೊಡುವ ಕೆಲಸ ಆಗುತ್ತಿದೆ. ಇನ್ನೂ ಮುಂದೆ ರಾಜ್ಯದಲ್ಲಿ ಕೊರೊನಾಗೆ ಹೋಂ ಕೇರ್ ಟ್ರೀಟ್ ಮೆಂಟ್ ಆರಂಭವಾಗಲಿದ್ದು, ಮನೆಯಲ್ಲೇ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಕೊಡುವ ಕೆಲಸ ಮಾಡಲಿದ್ದೇವೆ. ಹೈ ರಿಸ್ಕ್ ಕೋವಿಡ್ ಪ್ರಕರಣಗಳಿಗೆ ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.
ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಪ್ರಶ್ನೇಯೇ ಇಲ್ಲ. ಲಾಕ್ಡೌನ್ನ ಅವಶ್ಯಕತೆಯೇ ಇಲ್ಲ. ಲಾಕ್ಡೌನ್ಗಿಂತ ಪರಿಣಾಮಕಾರಿ ಮಾಸ್ಕ್ ಧರಿಸುವುದು. ಮಾಸ್ಕ್ ಬಳಕೆ ಸಾಮಾಜಿಕ ಅಂತರ ಕಾಪಾಡಿದರೆ ಸಾಕು. ಲಾಕ್ಡೌನ್ನಿಂದ ಕೊರೊನಾ ಸೋಂಕಿನ ಹರಡುವಿಕೆಯನ್ನು ಮುಂದೂಡಬಹುದು ಅಷ್ಟೇ. ಆದರೆ ಕೊರೊನಾ ವೈರಸ್ನಿಂದ ತಪ್ಪಿಸಿಕೊಳ್ಳಲಾಗಲ್ಲ. ಹೀಗಾಗಿ ಲಾಕ್ಡೌನ್ ಅವಶ್ಯಕತೆಯೇ ಇಲ್ಲ. ಲಾಕ್ಡೌನ್ ಮಾಡಬೇಕಾದ ಸಂದರ್ಭದಲ್ಲಿ ಈ ಹಿಂದೆ ಮಾಡಿದ್ದೇವು. ಈಗಲೂ ಮತ್ತೆ ಲಾಕ್ಡೌನ್ ಮಾಡಿದರೆ ಆರ್ಥಿಕ ಸಮಸ್ಯೆ ಮುಗ್ಗಟ್ಟು ಎದುರಾಗುತ್ತೆ. ಇದಕ್ಕಿಂತ ಸೋಂಕಿತರಾದರವರನ್ನು ಗುಣಮುಖಮಾಡೋಣ ಲಾಕ್ಡೌನ್ ಬೇಡ ಎಂದು ತಿಳಿಸಿದರು.
ಇದೇ ವೇಳೆ ಸಿದ್ದರಾಮಯ್ಯ ಅವರ ವಿರುದ್ದ ವಾಗ್ದಾಳಿ ಮಾಡಿದ ಡಿಸಿಎಂ, ಮೋದಿಯಂತಹ ದಿಟ್ಟ ನಾಯಕ ಇದುವರೆಗೂ ಈ ದೇಶದಲ್ಲಿ ನೋಡಿರಲಿಲ್ಲ. ಹೀಗಾಗಿ ಮೋದಿ ಬಗ್ಗೆ ಸಿದ್ದರಾಮಯ್ಯ ಅಭಿಮಾನಪಡಬೇಕು. ಮೋದಿ ಬಗ್ಗೆ ದುರಾಭಿಮಾನ ಪಡುವ ಬದಲು ಅಭಿಮಾನ ಪಡಿ ಎಂದು ಸಲಹೆ ನೀಡಿದರು.