ಬೆಂಗಳೂರು: ಮಾರಣಾಂತಿಕ ಕೊರೊನ ಎರಡನೇ ಅಲೆಯ ಗಂಭೀರತೆಯ ನಂತರ ಮೂರನೇ ಅಲೆಯನ್ನು ಎದುರಿಸಲು ಜಾಗೃತರಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ತಿಳಿಸಿದ್ದಾರೆ.
ಕೋವಿಡ್ ಸೋಂಕು ನಿಯಂತ್ರಣ ಸಂಬಂಧಿಸಿದಂತೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರೋಗ್ಯ ಕೇಂದ್ರಗಳು, ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ, ಅರೋಗ್ಯ ಸಹಾಯವಾಣಿ ಉದ್ಘಾಟಿಸಿ ಅಂಬುಲೆನ್ಸ್ ಹಾಗೂ ಔಷಧಿ ಸಿಂಪಡಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಡಿವಿಎಸ್ ಮಾತನಾಡಿದರು.
ಇನ್ನು ಮೂರ್ನಾಲ್ಕು ದಿನಗಳಲ್ಲಿ ಅವಶ್ಯಕವಾದಷ್ಟು ಕೋವಿಡ್ ವ್ಯಾಕ್ಸಿನ್ ಗಳನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಒದಗಿಸಲಿದೆ. ಜನತೆಗೆ ಯಾವುದೇ ರೀತಿಯ ಆತಂಕ ಬೇಡ. ಪ್ರಾರಂಭದಲ್ಲಿ ಇದ್ದ ಆತಂಕಗಳಿಲ್ಲ, ಚಿಕಿತ್ಸೆ, ಆಮ್ಲಜನಕ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ರಾಜ್ಯಗಳಿಗೆ ಕೇಂದ್ರಸರ್ಕಾರ ಒದಗಿಸಲಿದೆ. ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ಕೊಡಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಕೋವಿಡ್ ಸೋಂಕಿತ ಮಕ್ಕಳ ಶುಶ್ರೂಷೆಗಾಗಿ ವಿಶೇಷ ಕೇರ್ ಸೆಂಟರ್ ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಂತರ ಮಾತನಾಡಿದ ಮಾಜಿ ಶಾಸಕ ಎಸ್.ಮುನಿರಾಜು ಕ್ಷೇತ್ರದ ಅಧಿಕಾರಿಗಳು ಮತ್ತು ಆರೋಗ್ಯ ಕೇಂದ್ರಗಳ ಸಂಪರ್ಕದಲ್ಲಿ ಬಿಜೆಪಿ ಕಾರ್ಯಕರ್ತರು ಕೋವಿಡ್ ವಾರಿಯರ್ಸ್ ಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅದಕ್ಕೆ ಪೂರಕವಾಗಿ 3 ಅಂಬುಲೆನ್ಸ್, 6 ಔಷಧಿ ಸಿಂಪಡಣೆ ಟ್ರ್ಯಾಕ್ಟರ್ ಗಳನ್ನು ನೀಡಿದ್ದೇವೆ, ಪ್ರತಿ ವಾರ್ಡ್ಗಳಲ್ಲಿ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಸ್ಯಾನಿಟೇಷನ್ ಮಾಡಲಾಗುವುದು. ಗುರುಪ್ರಸಾದ್ ನೇತೃತ್ವದಲ್ಲಿ ಕೊರೊನಾ ಸೋಂಕಿತರಿಗೆ ಪ್ರತಿದಿನ ತಿಂಡಿ, ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಕೋವಿಡ್ ಸೋಂಕಿತರಿಗೆ ತುರ್ತಾಗಿ ಆಕ್ಸಿಜನ್ ಸೌಲಭ್ಯಗಳ ಅವಶ್ಯಕತೆ ಇದ್ದರೆ ತಾತ್ಕಾಲಿಕ ಪರಿಹಾರದೊಂದಿಗೆ ಅಂಥವರನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನು ಮಾಡಲಾಗುತ್ತದೆ. ಈ ಸಂಬಂಧ ಪ್ರತಿ ವಾರ್ಡ್ ಗಳಲ್ಲಿ ನಮ್ಮ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಬಳಿಕ ಮಾಜಿ ಶಾಸಕ ಬಿಜೆಪಿ ಮುಖಂಡ ಎಸ್ ಮುನಿರಾಜು ಹಾಗೂ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎನ್.ಲೋಕೇಶ್ ಅವರು ದಾಸರಹಳ್ಳಿ ಕ್ಷೇತ್ರದ ನಾಗರಿಕರ ಸೇವೆಗಾಗಿ ನೀಡಿರುವ 3 ಆಂಬುಲೆನ್ಸ್, 6 ಸ್ಯಾನಿಟೈಸೇಷನ್ ಟ್ರ್ಯಾಕ್ಟರ್ ಗಳನ್ನು ಸದಾನಂದಗೌಡ ಸಾರ್ವಜನಿಕ ಸೇವೆಗೆ ಸಮರ್ಪಣೆಗೊಳಿಸಿದರು.