ಬೆಂಗಳೂರು : ಕರ್ನಾಟಕದಲ್ಲಿ ಅಧಿಕೃತವಾಗಿ ಎರಡು ಡೆಲ್ಟಾ ಪ್ಲಸ್ ಕೇಸ್ ದಾಖಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾತಾನಾಡಿದ ಅವರು, ನಿನ್ನೆ ಮೈಸೂರಿನಲ್ಲಿ ಒಂದು ಕೇಸ್ ಮತ್ತೆ ಆಗಿತ್ತು. ಈಗ ಬೆಂಗಳೂರಿನಲ್ಲಿ ಹಿರಿಯ ವ್ಯಕ್ತಿಯೊಬ್ಬರಿಗೆ ಡೆಲ್ಟಾ ಪ್ಲಸ್ ಸೋಂಕು ಕಂಡು ಬಂದಿದೆ. ಅವರ ಮೇಲೆ ತೀವ್ರ ನಿಗಾ ಇಡಲಾಗಿದೆ. ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದವರನ್ನ ಪರೀಕ್ಷೆ ಮಾಡಲಾಗಿದ್ದು, ಇಂದು ವರದಿ ಬರಲಿದೆ ಎಂದು ತಿಳಿಸಿದರು.
ಡೆಲ್ಟಾ ಪ್ಲಸ್ ವೈರಸ್ ಕುರಿತು ಯಾರು ಹೆಚ್ಚು ಆತಂಕ ಪಡುವ ಅವಶ್ಯಕತೆ ಇಲ್ಲ. ಡೆಲ್ಟಾ ಪ್ಲಸ್ ಮತ್ತು ಡೆಲ್ಟಾ ವೈರಸ್ ಒಂದೇ ಗುಣಲಕ್ಷಣ ಹೊಂದಿದೆ. ಆದರೆ ಚಿಕಿತ್ಸೆ ವಿಧಾನ ಸ್ವಲ್ಪ ಬೇರೆ ಇದೆ ಎಂದು ಸ್ಪಷ್ಟಪಡಿಸಿದರು.
ಲಸಿಕೆ ಪರಿಣಾಮಕಾರಿ
ಡೆಲ್ಟಾ ಪ್ಲಸ್ ವೈರಸ್ ಸೇರಿದಂತೆ ಎಲ್ಲಾ ರೂಪಾಂತರ ವೈರಸ್ ಗೆ ನಮ್ಮ ಲಸಿಕೆಗಳು ಪರಿಣಾಮಕಾರಿಯಾಗಿದೆ. ಈಗಾಗಲೇ 2 ಸಾವಿರ ಸ್ಯಾಂಪಲ್ ಗಳ ಟೆಸ್ಟ್ ಆಗಿದ್ದು, ಮತ್ತಷ್ಟು ಹೆಚ್ಚಳ ಮಾಡಲಾಗುತ್ತದೆ. ಈಗಾಗಲೇ 6 ಜೀನೋಮ್ ಲ್ಯಾಬ್ ಪ್ರಾರಂಭಕ್ಕೆ ನಿರ್ಧಾರ ಮಾಡಲಾಗಿದ್ದು, ಮತ್ತಷ್ಟು ಸ್ಯಾಂಪಲ್ ಗಳನ್ನ ಹೆಚ್ಚಳ ಮಾಡುತ್ತೇವೆ ಎಂದು ತಿಳಿಸಿದರು.
ಕೇರಳದಲ್ಲಿ ಸೋಂಕು ಹೆಚ್ಚಾಗಿದ್ದು, ಇದರ ಬಗ್ಗೆ ನಮಗೆ ಸ್ವಲ್ಪ ಆತಂಕ ಇದೆ. 4-5% ಸೋಂಕು ಕೇಸ್ ಕೇರಳದಲ್ಲಿ ಬರುತ್ತಿದೆ. ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ನೆರೆಯ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ವೈರಾಣು ಪತ್ತೆ – ಸರ್ಕಾರಕ್ಕೆ ತಜ್ಞರ ಎಚ್ಚರಿಕೆ
ಮಕ್ಕಳಿಗೆ ಲಸಿಕೆ ಅವಶ್ಯಕತೆ ಇಲ್ಲ ಎಂಬ ಐಸಿಎಂಆರ್ ಮುಖ್ಯಸ್ಥರ ಹೇಳಿಕೆ ಅಧಿಕೃತವಾಗಿ ನಮಗೆ ಮಾಹಿತಿ ಬಂದಿಲ್ಲ. ಆದರೆ ಮಕ್ಕಳಿಗೆ ತೀವ್ರತರವಾದ ಸಮಸ್ಯೆ ಉಂಟಾಗುವುದಿಲ್ಲ ಎನ್ನುವುದು ವಿಶ್ವ ಮಟ್ಟದ ವಾದ. ತಜ್ಞರು, ಸಂಶೋಧಕರು ಮಕ್ಕಳಿಗೆ ಭೀಕರ ಪರಿಣಾಮ ಬೀರುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದು ಉತ್ತಮವಾದ ಅಂಶ. ಅ ನಿಟ್ಟಿನಲ್ಲಿ ನಾವು ವಿಚಾರ ಮಾಡಿದ್ದು, ನಾವು ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸುವ ಕೆಲಸ ಮಾಡುತ್ತೇವೆ. ಯಾಕೆಂದರೆ ಇದರ ಸ್ವರೂಪ, ಈ ವೈರಸ್ ಗುಣ, ಸ್ವಭಾವ ಹೊಸದಾಗಿ ಇರುವುದರಿಂದ ನಾವು ಹೆಚ್ಚು ನಿಗಾ ಇಟ್ಟಿದ್ದೇವೆ ಎಂದರು.