ಜೈಪುರ: ರಾಜಸ್ಥಾನದಲ್ಲಿ ಎದುರಾಗಿರುವ ರಾಜಕೀಯ ಬಿಕ್ಕಟ್ಟಿಗೆ ಸೋಮವಾರ ಮತ್ತೊಂದು ಟ್ವಿಸ್ಟ್ ಲಭಿಸಿದೆ. ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ 6 ಮಂದಿ ಬಿಎಸ್ಪಿ ಶಾಸಕರಿಗೆ ಪಕ್ಷ ವಿಪ್ ಜಾರಿ ಮಾಡಿದೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ವಿರುದ್ಧ ಮತದಾನ ಮಾಡುವಂತೆ ವಿಪ್ನಲ್ಲಿ ಬಿಎಸ್ಪಿ ಪಕ್ಷ ಶಾಸಕರಿಗೆ ಸೂಚನೆ ನೀಡಿದೆ. ಬಿಎಸ್ಪಿ ಶಾಸಕರು ಕಾಂಗ್ರೆಸ್ನಲ್ಲಿ ಸೇರ್ಪಡೆಯಾದರು ತಾಂತ್ರಿಕವಾಗಿ ಬಿಎಸ್ಪಿಯಲ್ಲಿ ಉಳಿದಿರುವುದರಿಂದ ವಿಪ್ ಜಾರಿ ಮಾಡಲಾಗಿದ್ದು, ಹೊಸ ಕಾನೂನಿನ ತೊಡಕು ಎದುರಾಗಿದೆ.
ಇದಕ್ಕೂ ಮುನ್ನ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ಅವರು ಚುನಾವಣಾ ಆಯೋಗಕ್ಕೆ ಈ ಕುರಿತು ದೂರು ಸಲ್ಲಿಸಿದ್ದರು. ಆದರೆ ಸ್ಪೀಕರ್ ಅವರ ಅಧಿಕಾರದ ವ್ಯಾಪ್ತಿಯಲ್ಲಿ ತಾವು ಸೂಚನೆ ನೀಡಲಾಗುವುದಿಲ್ಲ ಎಂದು ಚುನಾವಣಾ ಆಯೋಗ ಉತ್ತರಿಸಿತ್ತು. ಸದ್ಯ ರಾಜಸ್ಥಾನದಲ್ಲಿ ಮತ್ತೊಮ್ಮೆ ರಾಜಕೀಯ ಬಿಕ್ಕಟ್ಟು ಎದುರಾಗಿರುವ ಕಾರಣ ವಿಪ್ ಜಾರಿ ಮಾಡಲಾಗಿದೆ.
ಬಿಎಸ್ಪಿ ಪಕ್ಷ ರಾಷ್ಟ್ರೀಯ ಪಕ್ಷವಾಗಿದೆ. ರಾಷ್ಟ್ರಮಟ್ಟದಲ್ಲಿ ಪಕ್ಷ ಬೇರೊಂದು ಪಕ್ಷದಲ್ಲಿ ವಿಲೀನವಾದರೆ ಮಾತ್ರ ಅದನ್ನು ಕಾನೂನು ಅನ್ವಯ ಪರಿಗಣಿಸಲಾಗುತ್ತದೆ. ಸದ್ಯ ಪಕ್ಷದ ಆರು ಮಂದಿ ಶಾಸಕರಿಗೆ ನೋಟಿಸ್ ನೀಡಲಾಗಿದೆ. ಅವರು ವಿಪ್ ಉಲ್ಲಂಘಿಸಿದರೆ ಅನರ್ಹರಾಗುತ್ತಾರೆ ಎಂದು ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಸತೀಸ್ ಚಂದ್ರ ಮಿಶ್ರಾ ಹೇಳಿದ್ದಾರೆ.
BSP issues whip to its 6 MLAs- R Gudha, Lakhan Singh, Deep Chand, JS Awana, Sandeep Kumar & Wajib Ali, who are elected to Rajasthan Assembly, directing them to vote against Congress in any “No Confidence Motion” or any proceedings to be held during Rajasthan Assembly Session. pic.twitter.com/wvbnZWslVQ
— ANI (@ANI) July 26, 2020
ಇತ್ತ ಜುಲೈ 31 ರಂದು ವಿಧಾನಸಭಾ ಅಧಿವೇಶನ ನಡೆಸಲು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರಿಗೆ ಸಿಎಂ ಅಶೋಕ್ ಗೆಹ್ಲೋಟ್ ಮನವಿ ಮಾಡಿದ್ದರು. ಕೊರೊನಾ ವೈರಸ್ ಕುರಿತ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಅಧಿವೇಶನ ಕರೆಯಬೇಕು ಎಂದು ಕೋರಿದ್ದರು. ಇದಕ್ಕೂ ಮುನ್ನ ಮನವಿ ಮಾಡಿದ್ದ ಅಶೋಕ್ ಅವರ ಪತ್ರದಲ್ಲಿ ಯಾವುದೇ ದಿನಾಂಕ ಮತ್ತು ಅಧಿವೇಶನ ನಡೆಸಲು ಕಾರಣ ಉಲ್ಲೇಖಿಸಿಲ್ಲ ಎಂದು ರಾಜ್ಯಪಾಲರು ಮನವಿಯನ್ನು ತಿರಸ್ಕರಿಸಿದ್ದರು.