– ಸಿದ್ದರಾಮಯ್ಯನವ್ರ ಜೊತೆಗಿನ ಫೋಟೋ ವೈರಲಾಗ್ತಿಲ್ಲ ಯಾಕೆ?
ದಾವಣಗೆರೆ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿ ಬಿಜೆಪಿ ಪರ ಮಾತ್ರ ಪ್ರಚಾರ ಮಾಡಿಲ್ಲ. ಎಲ್ಲಾ ಪಕ್ಷಗಳಿಗೆ ಕೂಡ ಅವರು ಪ್ರಚಾರಕ್ಕೆ ಬಂದಿದ್ದಾರೆ ಎಂದು ತೋಟಗಾರಿಕಾ, ಪೌರಾಡಳಿತ ಸಚಿವ ನಾರಾಯಣ ಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಚುನಾವಣಾ ನೇತೃತ್ವ ವಹಿಸಿಕೊಂಡಿದ್ದರು. ಹೀಗಾಗಿ ರಾಗಿಣಿಯವರು ವಿಜಯೇಂದ್ರ ಅವರ ಜೊತೆ ಇರುವ ಫೋಟೋವನ್ನು ವೈರಲ್ ಮಾಡ್ತಾ ಇದ್ದಾರೆ. ಅದೇ ರೀತಿ ಸಿದ್ದರಾಮಯ್ಯನವರ ಜೊತೆ ಕೂಡ ಫೋಟೋ ಇದೆ. ಅದ್ಯಾಕೆ ವೈರಲ್ ಮಾಡ್ತಾ ಇಲ್ಲ ಎಂದು ಪ್ರಶ್ನಿಸಿದರು.
ಕೆಆರ್ ಪೇಟೆಯಲ್ಲಿ ರಾಗಿಣಿಗೆ ಹಿತೈಷಿಗಳು, ಚಿತ್ರರಂಗದವರು ಇದ್ದಾರೆ. ಅವರು ರಾಗಿಣಿಯನ್ನು ಪ್ರಚಾರಕ್ಕೆ ಕರೆಸಿರಬೇಕು. ರಾಗಿಣಿ ನಮ್ಮ ಪಕ್ಷಕ್ಕೆ ಸೇರುತ್ತಾರೆ ಎಂದು ಯಾವಾಗಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ನಾವು ರಾಗಿಣಿ ಅಂತ ತೆಗೊಂಡಿದ್ವಿ, ಡ್ರಗ್ ಹುಡುಗಿಯಂತಲ್ಲ: ರಮೇಶ್ ಜಾರಕಿಹೊಳಿ
ಡ್ರಗ್ಸ್ ಎನ್ನುವುದು ಒಂದು ಮಾಫಿಯಾ, ಅದನ್ನು ನಾಶ ಪಡಿಸುತ್ತೇವೆ. ಇದರಲ್ಲಿ ರಾಜಕೀಯ ವ್ಯಕ್ತಿಗಳು ಇರಬಹುದು. ಮಾಧ್ಯಮದಲ್ಲಿ ಎಲ್ಲ ಬರ್ತಾ ಇದೆ. ಡ್ರಗ್ಸ್ ವಿಚಾರದಲ್ಲಿ ತೀವ್ರ ರೀತಿ ರಾಜ್ಯ ಸರ್ಕಾರ ತನಿಖೆ ನಡೆಸುತ್ತಿದೆ. ಈ ವಿಚಾರದಲ್ಲಿ ಪೊಲೀಸರಿಗೆ ಕೂಡ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ನಮ್ಮ ಸರ್ಕಾರ ಕೊಟ್ಟಷ್ಟು ಯಾವ ಸರ್ಕಾರ ಕೂಡ ತನಿಖೆಗೆ ಸ್ವಾತಂತ್ರ್ಯ ನೀಡಿರಲಿಲ್ಲ ಎಂದು ತಿಳಿಸಿದರು.
ಡ್ರಗ್ಸ್ ಅಲ್ಲ ಅದೊಂದು ಮಾಫಿಯಾವಾಗಿದೆ. ಯಾವ ರಾಜಕಾರಣಿಗಳು ಇದ್ದರೂ ಅವರನ್ನು ಬಿಡೋದಿಲ್ಲ. ನಮ್ಮ ಪಕ್ಷದವರು ಆಗಿರಲಿ ಬೇರೆ ಪಕ್ಷದವರು ಆಗಿರಲಿ ಅವರನ್ನು ಬಿಡೋದಿಲ್ಲ ಎಂದು ಅವರು ಹೇಳಿದರು. ಇದನ್ನೂ ಓದಿ: ಡ್ರಗ್ಸ್ ದಂಧೆಯಲ್ಲಿ ಅಕ್ರಮ ಹಣದ ವಾಸನೆ – ಪ್ರಭಾವಿ ಶಾಸಕನ ಮೇಲೆ ಇಡಿ ಕಣ್ಣು
ಇದೇ ವೇಳೆ ಬೆಂಗಳೂರಿನಲ್ಲಿ ಮಳೆ ಅವಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಸ್ಥಳೀಯ ಕಾರ್ಪೊರೇಟರ್ ಗಳು ಹೋಗಿದ್ದಾರೆ. ಮಳೆ ಜಾಸ್ತಿಯಾದಗಿ ಈ ರೀತಿ ಅವಘಡವಾಗುತ್ತದೆ. ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಲೇ ಇದೆ. ಸರ್ಕಾರ ಹಾಗೂ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದೆ. ಒತ್ತುವರಿಯನ್ನು ತೆರವು ಗೊಳಿಸುವ ವಿಚಾರದಲ್ಲಿ ಅಡ್ಡಿ ಅಡಚಣೆಗಳು ಬಂದವು. ಸರಿಪಡಿಸಬೇಕು ಎಂದರೆ ನಾವು ಏನಾದ್ರು ಒಂದು ತ್ಯಾಗ ಮಾಡಬೇಕಿದೆ ಎಂದು ಹೇಳಿದರು.