ಗದಗ: ನಟಿ ರಾಗಿಣಿ ದ್ವಿವೇದಿ ಅವರಿಗೆ ಸಹಾಯ ಮಾಡುವ ಸಮಯ ನಮಗೆ ಬಂದಿಲ್ಲ ಎಂದು ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ.
ಡ್ರಗ್ಸ್ ವಿಚಾರ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಕುಣಿಕೆಯಲ್ಲಿ ಯಾರೇ ಇರಲಿ ಸರ್ಕಾರದಿಂದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಡ್ರಗ್ಸ್ ವಿಷಯದಲ್ಲಿ ಮುಖಮಂತ್ರಿ ಹಾಗೂ ಗ್ರಹ ಸಚಿವರು ವಿಶೇಷ ಕಾಳಜಿ ವಹಿಸಿದ್ದಾರೆ. ಇದರಲ್ಲಿ ಯಾರು ಇದ್ದಾರೆ ಎಂಬುದರ ಪತ್ತೆ ಕಾರ್ಯ ನಡೆಯುತ್ತಿದೆ ಎಂದರು.
ಬಿಜೆಪಿ ಸರ್ಕಾರ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೆ. ರಾಗಿಣಿ ವಿಚಾರದಲ್ಲಿ ಯಾವ ನಾಯಕರ ಕೈವಾಡವಿದೆ ಎಂಬುದು ಗೊತ್ತಿಲ್ಲ. ರಾಗಿಣಿಗೆ ಸಹಾಯ ಮಾಡುವ ಸಮಯ ನಮಗೆ ಬಂದಿಲ್ಲ. ಡ್ರಗ್ಸ್ ನಲ್ಲಿ ಯಾವುದೇ ರಂಗದವರಿದ್ದರೂ ಕ್ರಮ ಜರುಗಿಸುತ್ತೆವೆ. ಯಾರೇ ಇರಲಿ, ಎಷ್ಟೋ ದೊಡ್ಡವರು ಇರಲಿ ಉಪ್ಪು ತಿಂದವರು ನೀರು ಕುಡಿಯಲು ಬೇಕು ಎಂದು ತಿಳಿಸಿದರು.
ಸ್ಯಾಂಡಲ್ವುಡ್ ಡ್ರಗ್ ಡೀಲ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ನಟಿ ರಾಗಿಣಿಯನ್ನು ಮತ್ತೆ 5 ದಿನ ಕೋರ್ಟ್ ಸಿಸಿಬಿ ಪೊಲೀಸರ ಕಸ್ಟಡಿಗೆ ನೀಡಿದೆ. ಕೋರ್ಟ್ ಆದೇಶದ ಅನ್ವಯ ಶುಕ್ರವಾರದವರೆಗೂ ರಾಗಿಣಿ ಸಿಸಿಬಿ ಪೊಲೀಸರ ವಶದಲ್ಲಿ ಇರಲಿದ್ದಾರೆ. ರಾಗಿಣಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನ ನಗರದ 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯಿತು.
ಸಿಸಿಬಿ ಪರ ವಕೀಲರು ರಾಗಿಣಿ ವಿಚಾರಣೆ ನಡೆಸಬೇಕಿದೆ. ಹೀಗಾಗಿ 10 ದಿನ ನಮ್ಮ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದ್ದರು. ಸಿಸಿಬಿ ವಕೀಲರ ವಾದವವನ್ನು ಆಲಿಸಿದ ಬಳಿಕ ನ್ಯಾ.ಜಗದೀಶ್ ಅವರು 5 ದಿನ ಕಸ್ಟಡಿಗೆ ನೀಡಿದರು. ಇಂದಿನ ವಿಚಾರಣೆ ವೇಳೆ ರಾಗಿಣಿ ಪರ ವಕೀಲರು ಹಾಜರಾಗಿರಲಿಲ್ಲ.