– ಕೊರೊನಾ ಅಂತ ಹೆಣ ಬಿದ್ದಂತೆ ಮನೆಯಲ್ಲೇ ಬಿದ್ದುಕೊಂಡ್ರೆ ಹೇಗೆ?
ಶಿವಮೊಗ್ಗ: ಕೊರೊನಾ ಈಗ ಎಲ್ಲೆಡೆ ಹರಡುತ್ತಿದೆ. ಆದರೆ ರಾಕ್ಷಸರ ಹತ್ತಿರ ಅದು ಸುಳಿಯುವುದೇ ಇಲ್ಲ. ನನಗಂತೂ ಕೊರೊನಾ ಬಂದಿಲ್ಲ. ನಿಮಗೆ ಏನಾದರೂ ಕೊರೊನಾ ಬಂದಿದೆಯಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹಾಸ್ಯ ಚಟಾಕಿ ಹಾರಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೊರೊನಾ ಬರುತ್ತದೆ ಎಂದು ಹೆದರಿ ಹೆಣ ಬಿದ್ದಂತೆ ಮನೆಯಲ್ಲಿಯೇ ಬಿದ್ದುಕೊಂಡರೇ ಹೇಗೆ ಎಂದು ಪ್ರಶ್ನಿಸಿದರು. ಕೊರೊನಾ ಬರುತ್ತದೆ ಎಂಬ ಭಯದಿಂದ ಶಾಸಕರು, ಸಚಿವರು, ಸಂಸದರು ಹಾಗೂ ಅಧಿಕಾರಿಗಳು ಮನೆಯಲ್ಲೇ ಉಳಿದುಕೊಂಡರೇ ಅಭಿವೃದ್ಧಿ ಕಾರ್ಯಗಳ ಗತಿಯೇನು. ತಲೆ ಇದೆ ಎಂದು ಬಂಡೆಗೆ ಚಚ್ಚಿಕೊಳ್ಳಲು ಸಾಧ್ಯವೇ ಎಂದರು.
ಕೊರೊನಾ ಇದೆ ಎಂದು ಭಯ ಪಡುವ ಬದಲು ಕೊರೊನಾ ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಜೊತೆಗೆ ಅದು ಬರದಂತೆ ಜಾಗೃತಿ ವಹಿಸಬೇಕು ಎಂದು ಸಚಿವ ಈಶ್ವರಪ್ಪ ಕಿವಿ ಮಾತು ಹೇಳಿದರು.