ರಮೇಶ್ ಜಾರಕಿಹೊಳಿ ಹತಾಶೆಯಲ್ಲಿದ್ದಾರೆ, ಏನೋ ಸಮಸ್ಯೆ ಇರಬೇಕು: ಡಿಕೆಶಿ ತಿರುಗೇಟು

Public TV
2 Min Read
dk shivakumar ramesh jarkiholi

ಬೆಂಗಳೂರು: ಸಿಡಿ ಪ್ರಕರಣದ ಮಹಾನಾಯಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಿಸಿದ ಬೆನ್ನಲ್ಲೇ ಡಿಕೆಶಿ ಪ್ರತಿಕ್ರಿಯಿಸಿದ್ದು, ಪಾಪ ರಮೇಶ್ ಜಾರಕಿಹೊಳಿ ಹತಾಶೆಯಲ್ಲಿದ್ದಾರೆ. ಅವರಿಗೆ ಏನೋ ಸಮಸ್ಯೆ ಇರಬೇಕು. ಅವರು ಮಾತನಾಡಿದ್ದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಇದಕ್ಕೂ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಸಮಸ್ಯೆ, ಅವರೇ ಸರಿಪಡಿಸಿಕೊಳ್ಳಬೇಕು. ನಿನ್ನೆ ಒಂದು ಮಾತನಾಡುತ್ತಾರೆ, ಇಂದು ಒಂದು ಮಾತನಾಡುತ್ತಾರೆ. ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ, ಅವರದೇ ಸರ್ಕಾರ ಇದೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.

ಪೋಷಕರು ಸಹ ನಿಮ್ಮ ಹೆಸರು ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಅದರ ಅವಶ್ಯಕತೆ ಇಲ್ಲ, ಆ ಯುವತಿ ನನ್ನನ್ನು ಭೇಟಿ ಮಾಡಿಲ್ಲ. ಈ ಕುರಿತು ಬೆಳಗ್ಗೆಯೇ ಸ್ಪಷ್ಟಪಡಿಸಿದ್ದೇನೆ. ಯಾರೂ ನನ್ನನ್ನು ಭೇಟಿ ಮಾಡಿಲ್ಲ. ಬಿಜೆಪಿಗರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ, ಈ ಬಗ್ಗೆ ತನಿಖೆ ಮಾಡಲಿ. ರಮೇಶ್ ಜಾರಕಿಹೊಳಿ ನಾನೇ ಆ ಮಹಾನಾಯಕ ಎಂದು ಹೇಳಿರುವುದು ನನಗೆ ಗೊತ್ತಿಲ್ಲ ಎಂದರು.

ರಮೇಶ್ ಜಾರಕಿಹೊಳಿ ಹೇಳಿದ್ದೇನು?
ನಿನ್ನೆ ಹೇಳಿದಂತೆಯೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ದೊಡ್ಡ ಬಾಂಬ್ ಸಿಡಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ನೇರವಾಗಿ ಆರೋಪ ಮಾಡುವ ಮೂಲಕ ಆ ಮಹಾನಾಯಕ ಯಾರೆಂದು ಖಚಿತಪಡಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ತಮ್ಮ ಸಿಡಿ ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ನಾನು ನಿನ್ನೆ ಹೇಳಿದಂತೆ 4-6 ಗಂಟೆ ಒಳಗೆ ಕೆಲವು ಮಾಹಿತಿ ನೀಡುತ್ತೇನೆ. ಮಹಾನಾಯಕ ಯಾರು ಎಂಬುದನ್ನು ಅವರೇ ಹೇಳಿದ್ದಾರೆ. ಕಿಂಗ್‍ಪಿನ್ ನರೇಶ್ ಗೌಡ ಜೊತೆ ಸಂಪರ್ಕ ಇದೆ ಎಂದು ಒಪ್ಪಿಕೊಂಡಿದ್ದಾರೆ. ಮಹಾನಾಯಕ ರಾಜಕಾರಣಕ್ಕೆ ನಾಲಾಯಕ್, ಇಂಥ ಷಡ್ಯಂತ್ರವನ್ನು ಆ ನಾಯಕ ಮಾಡಬಾರದಿತ್ತು. ಆ ನಾಯಕ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಗಾಂ…ಡಿಕೆಶಿಯಂಥ ಗಾಂ….ಇಲ್ಲ. ನಾನು ಗಂಡಸು, ಡಿಕೆಶಿ ವಿರುದ್ಧ ದೂರು ಕೊಡುತ್ತೇನೆ. ಅವನಿಗೆ ಯಾಕೆ ಹೆದರಬೇಕು? ಮುಂದಿನ ಚುನಾವಣೆಯಲ್ಲಿ ಕನಕಪುರದಲ್ಲಿ ನಾನು ಡಿಕೆಶಿ ಸೋಲಿಸುತ್ತೇನೆ. ಕನಕಪುರದಲ್ಲಿ ಡಿಕೆಶಿ ಸೋಲಿಸಲು ಎಲ್ಲ ತಂತ್ರ ಮಾಡುತ್ತೇನೆ. ಡಿಕೆಶಿ ವಿರುದ್ಧ ಇವತ್ತೇ ದೂರು ಕೊಡ್ತೇನೆ, ಡಿಕೆಶಿ ವಿರುದ್ಧ ಎಸ್‍ಐಟಿಗೆ ನೇರವಾಗಿ ದೂರು ಕೊಡುತ್ತೇನೆ. ಕೇಸ್ ನಲ್ಲಿ ಯಾರೆಲ್ಲ ಇದ್ದಾರೆಂದು ತನಿಖೆಯಲ್ಲಿ ಗೊತ್ತಾಗುತ್ತದೆ. ಡಿಕೆಶಿ ವಿರುದ್ಧ ಇನ್ನೂ 11 ದಾಖಲೆ ಇದೆ, ಡಿಕೆಶಿ ರಾಜೀನಾಮೆ ನೀಡಲೇಬೇಕು ಎಂದು ರಮೇಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *