ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್ ದಾಖಲಾದ ನಾಲ್ಕು ದಿನಗಳ ಬಳಿಕ ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿಯನ್ನು ಎಸ್ಐಟಿ ವಿಚಾರಣೆಗೆ ಒಳಪಡಿಸಿತು.
ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾದ ರಮೇಶ್ ಜಾರಕಿಹೊಳಿಯನ್ನು ಮಧ್ಯಾಹ್ನ 2 ಗಂಟೆಯವರೆಗೂ ಎಸ್ಐಟಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿ ಉತ್ತರ ಪಡೆಯಲು ಯತ್ನಿಸಿತು. ಆದರೆ ಯಾವೊಂದು ಪ್ರಶ್ನೆಗೂ ಜಾರಕಿಹೊಳಿ ಸಮರ್ಪಕ ಉತ್ತರ ನೀಡಲಿಲ್ಲ. ನನ್ನ ವಿರುದ್ಧ ಷಡ್ಯಂತ್ರ್ಯ ನಡೀತಿದೆ, ನಾನು ದೂರು ಕೊಟ್ಟ ಎಷ್ಟೋ ದಿನಗಳ ಬಳಿಕ ಯುವತಿ ದೂರು ನೀಡಿದ್ದಾರೆ. ಸಿಡಿಯಲ್ಲಿರೋದು ಗ್ರಾಫಿಕ್ಸ್. ನನಗೂ ಯುವತಿಗೂ ಪರಿಚಯವೇ ಇಲ್ಲ ಎಂದು ವಿಚಾರಣೆ ವೇಳೆ ಜಾರಕಿಹೊಳಿ ಹೇಳಿದ್ರು ಎಂದು ತಿಳಿದುಬಂದಿದೆ.
ಕೆಲ ಪ್ರಶ್ನೆಗಳಿಗೆ ಉತ್ತರಿಸಲು ಕಾಲವಕಾಶ ಕೋರಿದ್ರು. ಇದನ್ನು ಪುರಸ್ಕರಿಸಿದ ಎಸ್ಐಟಿ, ಏಪ್ರಿಲ್ 2ರಂದು ಮತ್ತೆ ವಿಚಾರಣೆಗೆ ಬರಲು ಜಾರಕಿಗೊಳಿಗೆ ನಿರ್ದೇಶನ ನೀಡಿದೆ. ವಿಚಾರಣೆ ಬಳಿಕ ಯಾವುದೇ ಪ್ರತಿಕ್ರಿಯೆ ನೀಡದ ರಮೇಶ್ ಜಾರಕಿಹೊಳಿ ಆಡುಗೋಡಿ ಟೆಕ್ನಿಕಲ್ ಸೆಲ್ನಿಂದ ನಿರ್ಗಮಿಸಿದ್ರು.