ಚೆನ್ನೈ: ನಟ ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡಿನ ರಾಜಕೀಯಕ್ಕೆ ಪ್ರವೇಶಿಸದಿರುವ ನಿರ್ಧಾರ ವಿಚಾರವಾಗಿ ಸೋಮವಾರ ಚೆನ್ನೈನಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆ ಮಾಡಿ ನೋವುಂಟು ಮಾಡಬೇಡಿ ಎಂದು ತಲೈವಾ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ರಜನಿಕಾಂತ್, ನಾನು ರಾಜಕೀಯಕ್ಕೆ ಏಕೆ ಪ್ರವೇಶಿಸುತ್ತಿಲ್ಲ ಎಂಬುವುದಕ್ಕೆ ಕಾರಣವನ್ನು ಈಗಾಗಲೇ ತಿಳಿಸಿದ್ದೇನೆ. ಆದರೂ ರಜನಿ ಮಕ್ಕಳ್ ಮಂದ್ರಂ ಅನುಮತಿ ಪಡೆಯದೇ ಚೆನ್ನೈನಲ್ಲಿ ನಡೆಸಿದೆ. ಪ್ರತಿಭಟನೆಯಲ್ಲಿ ಭಾಗವಹಿಸದ ಕೆಲವು ಅಭಿಮಾನಿಗಳನ್ನು ನಾನು ಪ್ರಶಂಸಿಸುತ್ತೇನೆ. ನನ್ನ ನಿರ್ಧಾರದ ಬಗ್ಗೆ ದಯವಿಟ್ಟು ನನಗೆ ನೋವುಂಟು ಮಾಡುವಂತಹ ವಿಷಯ(ಪ್ರತಿಭಟನೆ)ಗಳಲ್ಲಿ ಪಾಲ್ಗೊಳ್ಳದಂತೆ ಪ್ರತಿಯೊಬ್ಬರಿಗೂ ನಾನು ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಜನವರಿ 5ರಂದು ಮಕ್ಕಳ್ ಮಂದ್ರಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹಾಗೂ ಕಾರ್ಯಕರ್ತರು ರಾಜಕೀಯದಿಂದ ನಿರ್ಗಮಿಸುತ್ತಿರುವ ರಜನಿಕಾಂತ್ ಅವರ ನಿರ್ಧಾರವನ್ನು ವಿರೋಧಿಸಿ ಜನವರಿ 10ರಂದು ಚೆನ್ನೈನಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿಕೆ ನೀಡಿದ್ದರು. ರಜನಿಕಾಂತ್ ನಿರ್ಧಾರ ವಿಚಾರ ಕೆಲವು ಅಭಿಮಾನಿಗಳಿಗೆ ನಿರಾಶೆ ಉಂಟಾಗಿ ರಜನಿಕಾಂತ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.
ಈ ಕುರಿತಂತೆ ಉತ್ತರ ಚೆನ್ನೈ ಜಿಲ್ಲಾಕಾರ್ಯದರ್ಶಿ ನಿಜವಾದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ. ಹಾಗೇನಾದರೂ ಭಾಗವಹಿಸದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದರು. ದಕ್ಷಿಣ ಚೆನ್ನೈ ಜಿಲ್ಲಾಕಾರ್ಯದರ್ಶಿ ರವಿಚಂದ್ರನ್ ರಜನಿಯವರು ಅನಾರೋಗ್ಯದ ಕಾರಣದಿಂದ ರಾಜಕೀಯದಿಂದ ದೂರಸರಿದಿದ್ದಾರೆ ಎಂದು ತಿಳಿಸಿದರು.
ಕಳೆದ ತಿಂಗಳು ರಜನಿಕಾಂತ್ ತಮ್ಮ ಆರೋಗ್ಯದ ದೃಷ್ಟಿಯಿಂದ ರಾಜಕೀಯಕ್ಕೆ ಪ್ರವೇಶಿಸುತ್ತಿಲ್ಲ ಎಂದು ತಿಳಿಸಿದ್ದರು. ಅಲ್ಲದೆ ಇತ್ತೀಚೆಗೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಿದ್ದು ದೇವರು ನನಗೆ ನೀಡಿದ ಎಚ್ಚರಿಕೆ ಗಂಟೆ ಎಂದು ಹೇಳಿದರು.