ಲಕ್ನೋ: ತಾಯಿ ಮಗನನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದೆ.
ಕೊಲೆಯಾದ ದುರ್ದೈವಿಗಳನ್ನು ಧರ್ಮದೇವಿ(52) ಮಗ ಸುರೇಂದ್ರ(22) ಎಂದು ಗುರುತಿಸಲಾಗಿದೆ. ತಾಯಿ ಮತ್ತು ಮಗ ಇಬ್ಬರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆಮಾಡಿ ಕೊಲ್ಲಲ್ಪಟ್ಟಿದ್ದಾರೆ. ಸೊರೊನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸರಯಾನ್ ದಿನಾ ಗ್ರಾಮದಲ್ಲಿ ಈ ಎರಡು ಹತ್ಯೆ ನಡೆದಿದೆ.
ಧರ್ಮದೇವಿ ತನ್ನ ಇಬ್ಬರು ಗಂಡು ಮಕ್ಕಳಾದ ಸುರೇಂದ್ರ ಮತ್ತು ಚೋಟು ಜೊತೆಗೆ ಸರಯನ್ ದಿನಾ ಗ್ರಾಮದಲ್ಲಿ ವಾಸವಾಗಿದ್ದರು. ಚೋಟು ಕೆಲವು ದಿನಗಳ ಹಿಂದೆ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದನು. ಸುರೇಂದ್ರ ತಾಯಿ ಜೊತೆಯಲ್ಲಿ ಮನೆಯಲ್ಲಿ ಇದ್ದನು. ತಾಯಿ ಮಗ ಇಬ್ಬರು ಮಲಗಿದ್ದಾರೆ. ಆದರೆ ಮನೆಯಿಂದ ಹೊರಗೆ ಯಾರು ಬಾರದೇ ಇರುವುದನ್ನು ಗಮನಿಸಿದ ನೆರೆಹೊರೆಯವರು ಅನುಮಾನದಿಂದ ಮನೆ ಹತ್ತಿರ ಹೋಗಿ ನೋಡಿದ್ದಾರೆ. ಆಗ ತಾಯಿ-ಮಗ ಇಬ್ಬರ ದೇಹ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಬ್ಬರ ಸಾವಿಗೆ ಕಾರಣ ತಿಳಿದುಬಂದಿಲ್ಲ. ಆಸ್ತಿ ವಿವಾದದಲ್ಲಿ ತಾಯಿ ಮಗನನ್ನು ಕೊಲೆ ಮಾಡಲಾಗಿದೆ ಎಂಬ ಶಂಕೆ ಇದೆ. ಈ ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಪತ್ತೆ ಹಚ್ಚುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.