– ಬೆಂಗಳೂರು, ಬೆಳಗಾವಿಗೆ ಸರ್ಕಾರ ಸೀಮಿತ ಆಗ್ತಿದೆ
– ಸಂಘಟನೆ, ನಾಯಕತ್ವದ ವಿರುದ್ಧ ಮಾತನಾಡಲ್ಲ
ಬೆಂಗಳೂರು: ದೆಹಲಿಗೆ ತೆರಳುವ ಮುನ್ನ ಸಿಎಂ ಆಪ್ತ, ಶಾಸಕ ಎಂ.ಪಿ.ರೇಣುಕಾಚಾರ್ಯ ನೂತನ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಹಗರಣದ ಬಾಂಬ್ ಸಿಡಿಸಿದ್ದಾರೆ. ಬುಧವಾರ ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಮುಂದೆ ಸ್ಫೋಟಕ ವಿಷಯ ಹಂಚಿಕೊಳ್ಳಲಿದ್ದೇನೆ ಅಂತ ಹೇಳಿದ್ದರು.
ನೂತನ ಸಚಿವ ಸಿ.ಪಿ.ಯೋಗೇಶ್ವರ್ ಮೆಗಾಸಿಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳಿವೆ. ಎಲ್ಲವನ್ನ ಇಂದು ದೆಹಲಿ ನಾಯಕರಿಗೆ ನೀಡಲಿದ್ದೇನೆ. ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಐವರು ಎಂಎಲ್ಸಿ ಗಳು ಸಚಿವರಾಗಿದ್ದು, ಕೇವಲ ಒಬ್ಬರಿಂದ ಸರ್ಕಾರ ರಚನೆಯಾಗಿಲ್ಲ. ಸಂಪುಟ ವಿಸ್ತರಣೆ ವೇಳೆ ಎಲ್ಲರಿಗೂ ಸಮಾನ ಅವಕಾಶ ನೀಡಬೇಕಿತ್ತು ಎಂದು ಗರಂ ಆಗಿದ್ದಾರೆ.
ಏನೂ ಇಲ್ಲದ ವೇಳೆ ಪಕ್ಷದ ಟಿಕೆಟ್ ನೀಡಿ ಯಡಿಯೂರಪ್ಪನವರು ನನ್ನನ್ನು ಬೆಳೆಸಿದರು. ಆದ್ರೆ ಮಧ್ಯ ಕರ್ನಾಟಕ ಮತ್ತು ದಾವಣಗೆರೆ ಜಿಲ್ಲೆಯ ಯಾರಿಗಾದ್ರೂ ಅವಕಾಶ ನೀಡಿ ಅಂತ ಕೇಳಿಕೊಳ್ಳಲಾಗಿತ್ತು. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಿಗೆ ಮಾತ್ರ ಸಂಪುಟ ಸೀಮಿತವಾಗಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಭಾಗಕ್ಕೂ ಅನ್ಯಾಯವಾಗಿದೆ. ಸಚಿವ ಸ್ಥಾನ ಸಿಗದಕ್ಕೆ ಮನಸ್ಸಿಗೆ ನೋವಾಗಿದೆ. ಸಂಘಟನೆಯಿಂದ ಮೇಲೆ ಬಂದವನು ನಾನು. ಯಡಿಯೂರಪ್ಪ ನಾಯಕತ್ವ, ಪಕ್ಷದ ವಿರುದ್ಧ ನಾನು ಯಾವತ್ತು ಮಾತಾಡಲ್ಲ ಎಂದು ಹೇಳಿದರು.
ಬುಧವಾರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಎಂಎಲ್ಸಿ ಹೆಚ್.ವಿಶ್ವನಾಥ್, ನೂತನ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಯೋಗೇಶ್ವರ್ ವಿರುದ್ಧ 420 ಕೇಸ್ ಇದೆ. ಸಾವಿರಾರು ಜನರಿಗೆ ನಿವೇಶನ ನೀಡೋದಾಗಿ ಹೇಳಿ ಮೋಸ ಮಾಡಿದ್ದಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದರು.