ಚಿತ್ರದುರ್ಗ: ಯೋಗೇಶ್ವರ್ ನನ್ನ ಬಳಿ ಏನೂ ಅಡವಿಟ್ಟಿಲ್ಲ, ಸಾಲವೂ ಪಡೆದಿಲ್ಲ ಸುಮ್ಮನೆ ಜಾರಕಿಹೊಳಿ ಹೇಳಿದ್ದಾರೆ. ಯಾಕೆ ಹಂಗೆ ಹೇಳಿದ್ರೋ ಗೊತ್ತಿಲ್ಲ, ಸತ್ಯಾಸತ್ಯತೆ ಇದ್ದರೆ ಮಾತನಾಡಲಿ ಎಂದು ಎಂಟಿಬಿ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಅಸ್ತಿತ್ವಕ್ಕೆ ಬರಲು 9 ಕೋಟಿಗೆ ಯೋಗೇಶ್ವರ್ ಅವರು ಎಂಟಿಬಿ ಬಳಿ ಮನೆ ಅಡ ಇಟ್ಟಿದ್ದಾರೆ ಎಂದು ಮಾಧ್ಯಮದವರೊಂದಿಗೆ ಸಚಿವ ಜಾರಕಿಹೊಳಿ ಹೇಳಿದ್ದರು. ಈ ವಿಚಾರವಾಗಿ ಮಾತನಾಡಿದ ಎಂಟಿಬಿ, ಯೋಗೇಶ್ವರ್ ನನ್ನ ಬಳಿ ಏನೂ ಅಡವಿಟ್ಟಿಲ್ಲ, ಸಾಲವೂ ಪಡೆದಿಲ್ಲ ಸುಮ್ಮನೆ ಜಾರಕಿಹೊಳಿ ಹೇಳಿದ್ದಾರೆ. ಜಾರಕಿಹೊಳಿ ಯಾವ ಕಾರಣಕ್ಕೆ ಹಾಗೆ ಹೇಳಿದರೋ ಗೊತ್ತಿಲ್ಲ. ಯಾಕೆ ಹೀಗೆ ಹೇಳಿದ್ದೀರಿ ಎಂದು ಜಾರಕಿಹೊಳಿಗೆ ಕೇಳಿದ್ದೇನೆ. ಸತ್ಯಾಸತ್ಯತೆ ಇದ್ದರೆ ಮಾತಾಡು ನೀನು ಎಂದು ಹೇಳಿದ್ದೇನೆ ಎಂದು ಜಾರಕಿಹೊಳಿ ನಿನ್ನೆ ನೀಡಿದ್ದ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.
ಸಿ.ಡಿ ಇದ್ದರೆ ಬಿಡುಗಡೆ ಮಾಡಲಿ. ಜನರಿಗೆ ಗೊತ್ತಾಗಲಿ. ಸಿ.ಡಿ ಖೋಟಾದವರು ಯಾರು ಎಂಬುದು ನನಗೆ ಗೊತ್ತಿಲ್ಲ. ಊಹಾಪೋಹಗಳು ಕೇಳಿಬರುತ್ತಿದೆ. ಅಂತೆ-ಕಂತೆ ಮಾತುಗಳನ್ನು ಮೀಡಿಯಾ ಮಂದೆ ಹೇಳಿದ್ದಾರೆ. ಸಿ.ಡಿ ಇದೆ ಎಂದು ಹೆದರಿಸಿಕೊಂಡಿದ್ದರೆ ಪ್ರಯೋಜನವಿಲ್ಲ. ವಿರೋಧಪಕ್ಷದವರಾಗಿ ಏನು ಮಾಡಬೇಕೋ ಅವರು ಮಾಡುತ್ತಾರೆ. ವಿರೋಧ ಪಕ್ಷದವರ ಕೆಲಸವೇ ವಿರೋಧ ಮಾಡುವುದು ಅದನ್ನು ಅವರು ಮಾಡುತ್ತಾರೆ ಎಂದರು.
ಮೂರು ದಿನಗಳಲ್ಲಿ ಖಾತೆ ಹಂಚಿಕೆ ನಡೆಯಲಿದೆ. ಯಾವ ಖಾತೆ ನೀಡುತ್ತಾರೋ ಗೊತ್ತಿಲ್ಲ, ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. 17ಜನ ಶಾಸಕರೂ ಒಗ್ಗಾಟ್ಟಾಗಿದ್ದೇವೆ. ಮುನಿರತ್ನ, ವಿಶ್ವನಾಥ ಸೇರಿ ಉಳಿದವರಿಗೂ ಮಂತ್ರಿಗಿರಿ ಕೊಡ್ತಾರೆ. ರಾಜಕಾರಣದಲ್ಲಿ ಸಮಾಧಾನವಾಗುವವರು ಇದ್ದಾರೆ ಅಸಮಾಧಾನವಾಗುವವರು ಇದ್ದಾರೆ. ಎಲ್ಲರನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಯಾರು ವಂಚಿತರಾಗಿದ್ದಾರೆ ಅವರಿಗೆ ಮುಂದಿನಗಳಲ್ಲಿ ಅವಕಾಶ ಸಿಗುತ್ತದೆ ಎಂದು ತಿಳಿಸಿದ್ದಾರೆ.