ದಾವಣಗೆರೆ: ಯುವತಿಯ ಸಲುವಾಗಿ ಇಬ್ಬರು ಸ್ನೇಹಿತರ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಹರಿಹರ ಪಟ್ಟಣದ ಹೊರವಲಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೊಲೆಯಿಂದ ಇಡೀ ಹರಿಹರ ಬೆಚ್ಚಿಬಿದ್ದಿದ್ದು, ತಲ್ಲಣ ಸೃಷ್ಟಿಸಿದೆ. ಅಫ್ತಾಬ್ ಖಾನ್(21) ಸ್ನೇಹಿತನಿಂದಲೇ ಕೊಲೆಯಾದ ಯುವಕ. ಹರಿಹರದ ವಿದ್ಯಾನಗರದ ನಿವಾಸಿಯಾದ ಅಕ್ಬರ್ ಖಾನ್ ಪುತ್ರ ಅಫ್ತಾಬ್ ಖಾನ್ ನನ್ನು ಕಾಲುವೆ ಬಳಿ ಕರೆದೊಯ್ದು ಆರೋಪಿ ರೋಷನ್ ಕೊಲೆ ಮಾಡಿದ್ದಾನೆ. ಪ್ರಕರಣ ತಡವಾಗಿ ಬೆಳೆಕಿಗೆ ಬಂದಿದೆ.
ಅಫ್ತಾಬ್ ಖಾನ್ ತಂದೆ ಅಕ್ಬರ್ ಖಾನ್ ಹರಿಹರ ನಗರದಲ್ಲಿ ಕೇಬಲ್ ಆಪರೇಟರ್ ಆಗಿ ಜೀವನ ನಡೆಸುತ್ತಿದ್ದು, ಡಿಪ್ಲೋಮಾ ವಿದ್ಯಾರ್ಥಿಯಾದ ಮೃತ ಅಫ್ತಾಬ್ ಖಾನ್ ಕಾಲೇಜು ರಜೆ ಇರುವುದರಿಂದ ಕೇಬಲ್ ರಿಪೇರಿ ಕೆಲಸಕ್ಕೆ ತೆರಳಿದ್ದಾನೆ. ಬೆಳಗ್ಗೆ ಮನೆಯಿಂದ ತೆರಳಿದ ಮೃತ ಆಫ್ತಾಬ್ ಖಾನ್ ರಾತ್ರಿಯಾದರೂ ಮನೆಗೆ ಬಂದಿಲ್ಲ. ಈ ವೇಳೆ ಹುಡುಕಾಟ ನಡೆಸಿದಾಗ ಆತನ ಸ್ನೇಹಿತ ಆರೋಪಿ ರೋಷನ್ ನೊಂದಿಗೆ ಆಫ್ತಾಬ್ ಹೋಗಿದ್ದ ಎಂಬ ಮಾಹಿತಿ ದೊರೆತಿದೆ. ತಕ್ಷಣ ಮೃತ ಅಫ್ತಾಬ್ ಖಾನ್ ತಂದೆ ಅಕ್ಬರ್ ಖಾನ್ ಆರೋಪಿ ರೋಷನ್ ಬಳಿ ವಿಚಾರಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಕಾಲುವೆಗೆ ತಳ್ಳಿ ಕೊಲೆ
ಯುವತಿ ವಿಚಾರವಾಗಿ ಮೃತ ಅಫ್ತಾಬ್ ಖಾನ್ ಹಾಗೂ ರೋಷನ್ ನಡುವೆ ಹರಿಹರ ಹೊರವಲಯದ ಹೊಸ ಕೆಹೆಚ್ ಬಿ ಕಾಲೋನಿಯ ಶೇರಾಪುರದ ಕಾಲುವೆ ಬಳಿ ಜಗಳ ಆಗಿದೆ. ಹುಡುಗಿ ವಿಚಾರ ಕೇಳುತ್ತಲೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಬಳಿಕ ವಿಕೋಪಕ್ಕೆ ತಿರುಗಿ ಆರೋಪಿ ರೋಷನ್ ಸ್ನೇಹಿತ ಆಫ್ತಾಬ್ ಖಾನ್ ನನ್ನು ಕೊಲೆಮಾಡಿದ್ದು, ಈಗ ಹರಿಹರ ಪೋಲಿಸರ ಅತಿಥಿಯಾಗಿದ್ದಾನೆ.