ದಾವಣಗೆರೆ: ನಾವು 17 ಜನ ರಾಜೀನಾಮೆ ಕೊಟ್ಟು ಪರೀಕ್ಷೆ ಬರೆದಿದ್ದೆವು, ಅವರು ಯಾವ ಎಕ್ಸಾಂ ಬರೆದಿದ್ದಾರೆ ಗೊತ್ತಿಲ್ಲ ಎಂದು ಸಚಿವ ಯೋಗೇಶ್ವರ್ ಗೆ ಆರೋಗ್ಯ ಸಚಿವ ಸುಧಾಕರ್ ಟಾಂಗ್ ನೀಡಿದರು.
ಪರೀಕ್ಷೆ ಬರೆದಿದ್ದೇವೆ, ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎಂಬ ಯೋಗೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾವು 17 ಜನ ರಾಜೀನಾಮೆ ಕೊಟ್ಟು ಪರೀಕ್ಷೆ ಬರೆದಿದ್ದೆವು, ಬಳಿಕ ಪಾಸ್ ಆಗಿ ಸಚಿವರಾಗಿದ್ದೇವೆ. ಯೋಗೇಶ್ವರ್ ಯಾವ ಪರೀಕ್ಷೆ ಬರೆದಿದ್ದಾರೋ ಗೊತ್ತಿಲ್ಲ ಎಂದು ಸುಧಾಕರ್ ವ್ಯಂಗ್ಯವಾಡಿದರು.
ರಮೇಶ್ ಜಾರಕಿಹೊಳಿ, ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಲ್ಲ ಎಂದು ಹೇಳಿದ್ದೆ, ಕೊಟ್ಟಿಲ್ಲ ಎಂದು ಸ್ಪಷ್ಟ ಪಡಿಸಿದರು.
ಲಸಿಕೆ ಹೆಚ್ಚು ಮಾಡಲಿಕ್ಕೆ ನಾನು ದೆಹಲಿಗೆ ಹೋಗಿದ್ದೆ, ಬೇರೆ ಅರ್ಥ ಕಲ್ಪಿಸುವುದು ಬೇಡ. 250 ಪಿಎಚ್ ಸಿ ಮೇಲ್ದರ್ಜೆಗೆ ಏರಿಸಲಾಗುವುದು, ಐದು ವರ್ಷದಲ್ಲಿ ಮೇಲ್ದರ್ಜೆಗೆ ಉದ್ದೇಶ ಹೊಂದಲಾಗಿದೆ. ಇದರ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿದ್ದೆ ಎಂದರು. ಲಸಿಕೆ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕಕ್ಕೆ ಎರಡುವರೆ ಕೋಟಿ ಲಸಿಕೆ ಸುಳ್ಳು ಲೆಕ್ಕಾನಾ, ದೇಶದಲ್ಲಕ 38 ಕೋಟಿ ಜನಕ್ಕೆ ಲಸಿಕೆ ನೀಡಲಾಗಿದ್ದು, ಅಮೇರಿಕದಲ್ಲಿ ಎಷ್ಟು ಕೊಟ್ಟಿದ್ದಾರೆ ಕೇಳಿ ಒಮ್ಮೆ, ಸಿದ್ದರಾಮಯ್ಯನವರಿಗೆ ಸುಳ್ಳು ಲೆಕ್ಕ ಹೇಳುವ ಅಭ್ಯಾಸ ಇರಬೇಕು ಎಂದು ತಿರುಗೇಟು ನೀಡಿದರು.