– ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆಗೆ
ಬೆಂಗಳೂರು: ಇಡೀ ರಾಜ್ಯ ಉಪಚುನಾವಣೆ ಫಲಿತಾಂಶ ನೋಡುತ್ತಿದೆ. ಯಾರು ಪಕ್ಷಕ್ಕೆ ದುಡಿಯುತ್ತಾರೋ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬಂದರೆ ಅವರನ್ನ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನೂರು ಜನ ಮುಖಂಡರು ಪಕ್ಷ ಸೇರ್ಪಡೆ ಆಗಿದ್ದಾರೆ. ಇವರ ಹಿಂದೆ ಸಾವಿರಾರು ಜನ ಪಕ್ಷ ಸೇರ್ಪಡೆ ಆಗುತ್ತಾರೆ. ಇವರ ಸೇರ್ಪಡೆ ಪಕ್ಷದ ಶಕ್ತಿ ಮತ್ತಷ್ಟು ಜಾಸ್ತಿ ಮಾಡಿದೆ. ಅಲ್ಲದೇ ನಮ್ಮಲ್ಲಿ ಹೊಸಬರು ಹಳಬರು ಅಂತ ನೋಡಲ್ಲ, ಕಾಂಗ್ರೆಸ್ ಅಷ್ಟೇ ಮುಖ್ಯ. ಎಲ್ಲರನ್ನೂ ಸಂಘಟನೆಗೆ ಬಳಸಿಕೊಳ್ಳುತ್ತೇವೆ. ಇಡೀ ರಾಜ್ಯ ಉಪಚುನಾವಣೆ ಫಲಿತಾಂಶ ನೋಡುತ್ತಿದೆ. ಯಾರು ಪಕ್ಷಕ್ಕೆ ದುಡಿಯುತ್ತಾರೋ ಅವರಿಗೆ ಸೂಕ್ತ ಸ್ಥಾನಮಾನ. ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ಅವಕಾಶ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬಂದರೆ ಅವರನ್ನ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದರು.
ದೆಹಲಿಗೆ ಇಂದು ಅಭ್ಯರ್ಥಿ ಪಟ್ಟಿಯನ್ನು ಶಿಫಾರಸು ಮಾಡುತ್ತೇವೆ. ನಾವು ಟಿಕೆಟ್ ಕೊಡಲ್ಲ. ಹೈಕಮಾಂಡ್ ಟಿಕೆಟ್ ಪ್ರಕಟಿಸುತ್ತದೆ. ಶಿರಾ, ರಾಜರಾಜೇಶ್ವರಿ ನಗರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಟಿಕೆಟ್ ಅಂತಿಮ ಆಗುತ್ತದೆ. ಶಿರಾ ಕ್ಷೇತ್ರದಲ್ಲಿ ಈ ಹಿಂದೆ ಜಯಚಂದ್ರ 10 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಇಡೀ ಜಿಲ್ಲೆಯ ನಾಯಕರು ಒಂದಾಗಿದ್ದಾರೆ. ರಾಜ್ಯ ಸರ್ಕಾರದ ಕಾರ್ಯಕ್ರಮ ಮತ್ತು ಆಗುತ್ತಿರುವ ಬೆಳವಣಿಗೆ ನೋಡಿದ್ದೇವೆ. ಮುಂದೆ ಕಾಂಗ್ರೆಸ್ ಮಾತ್ರ ಅನಿವಾರ್ಯ ಅಂತ ಶಿರಾ ತಾಲೂಕಿನ ಹಲವು ಮುಖಂಡರು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ ಎಂದು ತಿಳಿಸಿದರು.
ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳ ವಿರುದ್ಧ 2 ಕೋಟಿ ಸಹಿ ಸಂಗ್ರಹ ಮಾಡುವ ಯೋಜನೆ ಹಮ್ಮಿಕೊಂಡಿದ್ದೇವೆ. ಪ್ರತಿ ಪಂಚಾಯತ್ ಮಟ್ಟದಲ್ಲಿ ಸಹಿ ಸಂಗ್ರಹ ಮಾಡಬೇಕು. ಪ್ರತಿ ಪಂಚಾಯತಿಯಲ್ಲಿ 1 ಸಾವಿರ ಜನರ ಸಹಿ ಮಾಡಿಸಬೇಕು. ಅಕ್ಟೋಬರ್ 31ರೊಳಗೆ ಸಹಿ ಸಂಗ್ರಹ ಮಾಡಿಸಿ ಕೆಪಿಸಿಸಿಗೆ ಕಳುಹಿಸಿಕೊಡಬೇಕು.
ಉತ್ತರ ಪ್ರದೇಶದ ಅತ್ಯಾಚಾರ ಪ್ರಕರಣದ ವಿರುದ್ಧ ದೇಶದ ಜನರು ಪ್ರತಿಭಟನೆ ನಡೆಸಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯನ್ನು ನಡೆಸಿಕೊಂಡ ರೀತಿ ಎಲ್ಲರಿಗೂ ಗೊತ್ತಿದೆ. ನಿರ್ಭಯಾ ಪ್ರಕರಣದಲ್ಲಿ ಪ್ರಧಾನಿಯೇ ಮುಂದೆ ನಿಂತು ಕರೆಯಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಅವರ ತಂದೆ ತಾಯಿಗೂ ನೋಡಲು ಅವಕಾಶ ನೀಡಿಲ್ಲ. ಇದರಿಂದ ನಮ್ಮ ದೇಶಕ್ಕೆ ಕಳಂಕ ಬಂದಿದೆ. ಇದರ ವಿರುದ್ಧ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.