ಮುಂಬೈ: ಟೀಂ ಇಂಡಿಯಾ ವಿರಾಟ್ ಕೊಹ್ಲಿ ಅವರು ಯಶಸ್ವಿಯಾಗಲು ಹಲವು ಸಂದರ್ಭಗಳಲ್ಲಿ ಸಲಹೆ ನೀಡಿದ್ದಾರೆ ಎಂದು ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಹಾರ್ದಿಕ್ ಪಾಂಡ್ಯ, “ಎರಡು ದಿನಗಳ ಹಿಂದೆ ನಾನು ವಿರಾಟ್ ಕೊಹ್ಲಿ ಅವರೊಂದಿಗೆ ಮಾತನಾಡಿದ್ದೇನೆ. ಆಗ ನಿಮ್ಮ ಯಶಸ್ಸಿನ ರಹಸ್ಯವೇನು ಎಂದು ಅವರನ್ನು ಕೇಳಿದೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ವಿರಾಟ್, ನಿಮ್ಮ ವರ್ತನೆ ಚೆನ್ನಾಗಿದೆ, ಪ್ರದರ್ಶನ ಎಲ್ಲವೂ ಸರಿಯಾಗಿದೆ. ಆದರೆ ಕ್ರಿಕೆಟ್ನಲ್ಲಿ ನಂಬರ್-1 ಆಗಲು ನೀವು ಇಚ್ಛಿಸುವುದಾದರೆ ಸರಿಯಾದ ಮಾರ್ಗವನ್ನು ಅನುಸರಿಸಬೇಕು. ನಿಮ್ಮ ಗುರಿಯನ್ನು ತಲುಪಲು ನಿರಂತರವಾಗಿ ಶ್ರಮಿಸಬೇಕೇ ಹೊರತು ಯಾರನ್ನೂ ತಳ್ಳಿ ನಂಬರ್-1 ಸ್ಥಾನಕ್ಕೆ ಬರುವುದು ಸರಿಯಲ್ಲ ಎಂದು ತಿಳಿಸಿದ್ದರು ಎಂದು ನೆನೆದರು.
“ವಿರಾಟ್ ಕೊಹ್ಲಿ ಏಕೆ ನಂಬರ್-1 ಆದರು ಎನ್ನುವುದು ಈಗ ನನಗೆ ಅರ್ಥವಾಯಿತು. ರೋಹಿತ್ ಶರ್ಮಾ ಮತ್ತು ಧೋನಿ ಅವರಂತಹ ಆಟಗಾರರು ಎಂದಿಗೂ ನಂಬರ್-2 ಆಗಲು ಬಯಸುವುದಿಲ್ಲ. ಅವರು ಸಹ ನಂಬರ್-1 ಆಗಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದರು.
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಹಾರ್ದಿಕ್ ಪಾಂಡ್ಯ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ವಿರಾಟ್ ನಾಯಕತ್ವದಲ್ಲಿ ಅವರು ಮೊದಲ ಟೆಸ್ಟ್ ಆಡಿದ್ದರು. ಇದಲ್ಲದೆ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡುತ್ತಾರೆ.