ಲಕ್ನೋ: ಕೊರೊನಾ 2ನೇ ಅಲೆಗೆ ಭಾರತ ತತ್ತರಿಸಿ ಹೋಗಿದೆ. ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ನಡೆಸುವುದು ಕುಟುಂಬಸ್ಥರಿಗೆ ಸರ್ಕಾರಗಳಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಈ ನಡುವೆಯೇ ಉತ್ತರಪ್ರದೇಶದ ಹಮೀರ್ಪುರ ಜಿಲ್ಲೆಯ ಯಮುನಾ ನದಿಯ ದಡದಲ್ಲಿ ಕೊರೊನಾ ಸೋಂಕಿತರ ಮೃತದೇಹಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲಾ ಕೇಂದ್ರವಾಗಿರುವ ಹಮೀರ್ಪುರದ ಬಳಿ ಹರಿಯುವ ಯಮುನಾ ನದಿಗೆ ಕೊರೊನಾ ಸೋಂಕಿತರ ಮೃತದೇಹವನ್ನು ಎಸೆಯಲಾಗಿದೆ. ನಿನ್ನೆ ಒಂದೇ ದಿನ ಸುಮಾರು 7 ಮೃತದೇಹಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಹಮೀರ್ಪುರದ ಎಸ್ಪಿ ಅನೂಪ್ ಕುಮಾರ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ನದಿಯ ದಡದಲ್ಲಿ ಹಲವು ಮೃತದೇಹಗಳು ಪತ್ತೆಯಾಗಿರುವುದಾಗಿ ಹೇಳಿದ್ದಾರೆ.
ಕಾನ್ಪುರ ಹಾಗೂ ಹಮೀರ್ಪುರ ಜಿಲ್ಲೆಗಳಲ್ಲಿ ಸೋಂಕಿನಿಂದ ಸಾವನ್ನಪ್ಪಿದ ಅಂತ್ಯಸಂಸ್ಕಾರ ನಡೆಸಲು ಸಮಸ್ಯೆ ಎದುರಾಗುತ್ತಿದೆ. ಇದರ ನಡುವೆಯೇ ಅರೆಬರೆ ಬೆಂದ ಮೃತದೇಹಗಳನ್ನು ತಂದು ನದಿಗೆ ಎಸೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ನದಿಯಲ್ಲಿ ಒಂದು ಅಥವಾ ಎರಡು ಮೃತದೇಹಗಳು ಸಿಗುವುದು ಇಲ್ಲಿ ಸಾಮಾನ್ಯವಾಗಿದೆ. ಆದರೆ ಕೊರೊನಾ 2ನೇ ಅಲೆಯ ನಡುವೆ ಇಷ್ಟು ಮೃತ ದೇಹಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಮೃತದೇಹಗಳ ಅಂತ್ಯ ಸಂಸ್ಕಾರದಲ್ಲಿ ಉಂಟಾಗುತ್ತಿರುವ ಲೋಪಗಳೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.