ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಮಾಜದ ಅಸ್ತ್ರ. ಯತ್ನಾಳ್ ಹಿಂದೆ ನಮ್ಮ ಸಮಾಜವಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿಗಳು, ನಮ್ಮ ಧರಣಿಗೆ ಅನುಮತಿ ನೀಡೋದಾಗಿ ಪೊಲೀಸ್ ಕಮಿಷನರ್ ಕಮಲ್ ಪಂಥ್ ಅವರೇ ಹೇಳಿದ್ದರು. ಮೌರ್ಯ ಸರ್ಕಲ್ ಮತ್ತು ವಿಧಾನಸೌಧದ ಮುಂಭಾಗ ಪ್ರತಿಭಟನೆ ಸಾರ್ವಜನಿಕರಿಗೆ ತೊಂದರೆ ಆಗಲಿದೆ ಎಂದು ಕಮಲ್ ಪಂಥ್ ಹೇಳಿದರು. ಅವರ ಮನವಿ ಹಿನ್ನೆಲೆ ಫ್ರೀಡಂ ಪಾರ್ಕ್ನಲ್ಲಿ ಧರಣಿ ನಡೆಸಲು ನಿರ್ಧರಿಸಲಾಗಿದೆ. ಏನು ಬೇಕಾದ್ರೂ ಆಗಬಹುದು ಅನ್ನೋದಕ್ಕಿಂತ ಏನು ಆಗದೇ ಹಾಗೆ ನೋಡಿಕೊಳ್ಳಲಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬಸನಗೌಡ ಪಾಟೀಲ್ ಯತ್ನಾಳ್ ನೇರವಾಗಿ ಮಾತನಾಡುವ ವ್ಯಕ್ತಿ. ಈ ಹಿಂದೆಯೂ ಅನೇಕ ಬಾರಿ ಪಕ್ಷದ ಮುಖಂಡರ ಬಗ್ಗೆ ಮಾತನಾಡಿದ್ದಾರೆ. ಅಂದು ನೀಡದ ನೋಟಿಸ್ ನೀಡದ ಬಿಜೆಪಿ ಹೈಕಮಾಂಡ್ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾದಾಗ ನೀಡಿದ್ದು ಯಾಕೆ? ಈ ಸಂದರ್ಭದಲ್ಲಿ ಯತ್ನಾಳ್ ಅವರಿಗೆ ನೋಟಿಸ್ ನೀಡಿದ್ದರಿಂದ ಸಮಾಜದಲ್ಲಿ ಬೇರೆ ಸಂದೇಶ ರವಾನೆ ಆಗ್ತಿದೆ. ನೋಟಿಸ್ ನೀಡುವ ಮೂಲಕ ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಒತ್ತಡ ಹಾಕಲಾಯ್ತು ಎಂದು ಸ್ವಾಮೀಜಿಗಳು ಆರೋಪಿಸಿದರು.
ಯತ್ನಾಳ್ ವಿರುದ್ಧ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಹೋರಾಟದ ಬಗ್ಗೆ ಬಿಜೆಪಿ ಹೈಕಮಾಂಡ್ ಗೆ ತಪ್ಪು ಸಂದೇಶ ಕಳುಹಿಸದಂತೆ ಕಾಣಿಸುತ್ತಿದೆ. ಹಾಗಾಗಿ ಬಿಜೆಪಿ ರಾಜ್ಯಾಧ್ಯಕ್ಷರು ಮುಂದೆ ಬಂದು ತಪ್ಪು ಸಂದೇಶ ರವಾನೆ ಆಗೋದನ್ನ ತಡೆಯಬೇಕಿದೆ. ಮೀಸಲಾತಿ ಪರವಾಗಿ ಹೋರಾಟ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ್ರೆ ಸುಮ್ಮಿನರಲ್ಲ ಎಂದು ಎಚ್ಚರಿಸಿದರು.