– ಕರ್ನಾಟಕದಲ್ಲಿ ವಿರೋಧ ಪಕ್ಷವೇ ಇಲ್ಲ, ಇಲ್ಲಿ ಬಿಎಸ್ವೈ ಪಕ್ಷ ಅಷ್ಟೇ
ಬೆಂಗಳೂರು: ಯಡಿಯೂರಪ್ಪ ನನ್ನನ್ನು ಹೆದರಿಸಬೇಡಿ, ನೀವು ನನಗಿಂತ ವಿಧಾನಸಭೆಗೆ ಜ್ಯೂನಿಯರ್ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಲು 50 ಕೋಟಿ ಮೀಸಲಿಟ್ಟಿರುವುದಕ್ಕೆ, ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕನ್ನಡಪರ ಹೋರಾಟಗಾರರು ಸರ್ಕಾರದ ಈ ತೀರ್ಮಾನವನ್ನು ವಿರೋಧಿಸಿ ಡಿಸೆಂಬರ್ 5ರಂದು ಕರ್ನಾಟಕ ಬಂದ್ ಮಾಡಲು ತೀರ್ಮಾನ ಮಾಡಿದ್ದು ಇಂದು ಈ ವಿಚಾರವಾಗಿ ಸಭೆ ನಡೆಯಿತು.
ಈ ಸಭೆಯ ನಂತರ ಮಾತನಾಡಿದ ವಾಟಾಳ್ ನಾಗರಾಜ್ ಅವರು, ಯಾರು ಏನ್ ಬೇಕಾದರೂ ಕಠಿಣ ಕ್ರಮಕೈಗೊಳ್ಳಲಿ. ನಾವಂತೂ ಬಂದ್ ಮಾಡೇ ಮಾಡುತ್ತೇವೆ. ಡಿಸೆಂಬರ್ 5ರಂದು ಬಂದ್ ನಡೆದೇ ನಡೆಯುತ್ತದೆ. ಮರಾಠಿ ಪ್ರಾಧಿಕಾರ ಮಾಡಿದರೆ ಯಡಿಯೂರಪ್ಪನವರ ರಾಜೀನಾಮೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಬಂದ್ ಮಾಡುತ್ತೇವೆ. ಕಠಿಣ ಕ್ರಮ ಏನ್ರೀ ಮಾಡುತ್ತೀರಾ ಯಡಿಯೂರಪ್ಪ? ನಾವು ಕರ್ನಾಟಕದ ಜನ ನಿಮ್ಮ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ವಿರೋಧ ಪಕ್ಷದ ಬಗ್ಗೆ ಮಾತನಾಡಿ, ಕರ್ನಾಟಕದಲ್ಲಿ ವಿರೋಧ ಪಕ್ಷವೇ ಇಲ್ಲ. ಇಲ್ಲಿ ಯಡಿಯೂರಪ್ಪನ ಪಕ್ಷ ಅಷ್ಟೇ. ವಿರೋಧ ಪಕ್ಷದವರು ಈ ಪ್ರಾಧಿಕಾರದ ವಿರುದ್ಧ ಮಾತಾನಾಡದೇ ಮನೆಯಲ್ಲಿ ಸೇರಿಕೊಂಡಿದ್ದಾರೆ. ಈಗ ಮರಾಠಿಯವರನ್ನು ಎದುರು ಹಾಕೊಂಡರೆ ವೋಟು ಸಿಗಲ್ಲ ಎಂದು ಕಾಂಗ್ರೆಸ್ಗೆ ಭಯ ಎಂದರು.