– ಲಂಬಾಣಿ ಸಮುದಾಯದ ಜೊತೆ ಸಂವಾದ
ವಿಜಯಪುರ: ಕೋವಿಡ್ ಸಂದರ್ಭದಲ್ಲಿ ಮೋದಿ ಚಪ್ಪಾಳೆ, ತಟ್ಟೆ ಹೊಡೆಯೊದು ಬಿಟ್ಟು ಅಭಿವೃದ್ಧಿ ಕೆಲಸ ಮಾಡಿಲ್ಲ. ಅಲ್ಲದೆ ನಾನು ಕೋವಿಡ್ ಸಂದರ್ಭದಲ್ಲಿ ವಲಸೆ ಕಾರ್ಮಿಕ ಸಹಾಯ ಮಾಡಲು ಸಿಎಂ ಬಿಎಸ್ವೈ ಗೆ ಚೆಕ್ ಕೊಟ್ಟೆ ಅದನ್ನು ಅವರು ಉಪಯೋಗ ಮಾಡಿಕೊಂಡಿಲ್ಲ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ತಾಂಡಾದಲ್ಲಿ ಸಂವಾದ ಕಾರ್ಯಕ್ರಮ ನಡೆಸಿದ ಬಳಿಕ ಮಾತನಾಡಿದ ಡಿಕೆಶಿ, ನಾನು ಕೋವಿಡ್ ಸಂದರ್ಭ ಸಿಎಂ ಜೊತೆ ವಲಸೆ ಕಾರ್ಮಿಕರ ಸಹಾಯಕ್ಕಾಗಿ ವೀಡಿಯೋ ಮೂಲಕ ಕೇಳಿಕೊಂಡಿದ್ದೆ. ಕೊರೊನಾದಿಂದಾಗಿ ಲಕ್ಷಾಂತರ ಮಂದಿ ವ್ಯಾಪಾರ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅವರಿಗೂ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ. ನಾನು ಮೀನುಗಾರರನ್ನು ಭೇಟಿಯಾಗಿದ್ದೇನೆ. ಒಬ್ಬ ಮೀನುಗಾರನ ಹಿಂದೆ ಇಡಿ ಕುಟುಂಬ ಇರುತ್ತದೆ. ಅಲ್ಲದೇ ತಾಂಡಾಗಳಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಕೇಳಿಕೊಂಡರು ಏನು ಕ್ರಮ ಕೈಗೊಂಡಿಲ್ಲ ಎಂದು ಯಡಿಯೂರಪ್ಪ ಸರ್ಕಾರದ ವಿರುದ್ಧ ಕಿಡಿಕಾರಿದರು.
ಈ ಮೊದಲು ಲಂಬಾಣಿ ಸಮುದಾಯದ ಜೊತೆ ಡಿ.ಕೆ ಶಿವಕುಮಾರ್ ಸಂವಾದ ನಡೆಸಿದರು. ತಾಂಡಾದ ಜನರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆ ಆಲಿಸಿದರು. ವೇದಿಕೆಯ ಕೆಳ ಭಾಗದಲ್ಲೇ ಕುಳಿತು ಡಿಕೆಶಿ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದನ್ನೂ ಓದಿ: ಬಿಜೆಪಿಯವರು ಲಿಂಗಾಯತ ಸಮುದಾಯವನ್ನು ತಮ್ಮ ಆಸ್ತಿ ಅಂತ ತಿಳಿದುಕೊಂಡಿದ್ದಾರೆ: ಡಿಕೆಶಿ
ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್, ಯಶವಂತ ರಾಯಗೌಡಾ ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಡಿಕೆಶಿ ಅವರಿಗೆ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಬಹುತೇಕರು ಮಾಸ್ಕ್ ಇಲ್ಲದೆ ಪಾಲ್ಗೊಂಡಿದ್ದರು.