ಕಾರವಾರ: ಕೊರೊನಾ ಸೋಂಕಿತನ ಸಂಪರ್ಕ ಹೊಂದುವ ಮೂಲಕ ಕ್ವಾರಂಟೈನ್ ಆಗಿದ್ದ ವೃದ್ಧೆಯೊಬ್ಬರು ತಮಗೂ ಕೊರೊನಾ ಬಂದಿದೆ ಎಂದು ಭಯಗೊಂಡು, ಐಸೋಲೇಟೆಡ್ ವಾರ್ಡಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಈ ಘಟನೆ ನಡೆದಿದೆ. ಮಹರಾಷ್ಟ್ರದಿಂದ ಬಂದಿದ್ದ ಮೃತ ವೃದ್ಧೆಯ ಮೊಮ್ಮಗನಿಗೆ(ರೋಗಿ-1313) ಸೋಂಕು ತಗುಲಿರುವುದು ದೃಢಪಟ್ಟಿತ್ತು. ಸೋಂಕಿತ ವ್ಯಕ್ತಿ ತಮ್ಮ ಇಬ್ಬರು ಅಜ್ಜಿಯರು ಹಾಗೂ ಸಹೋದರನ ಜೊತೆ ವಾಸವಾಗಿದ್ದರು. ಈ ಹಿನ್ನೆಲೆ ವ್ಯಕ್ತಿ ಸಂಪರ್ಕದಲ್ಲಿದ್ದ ಇಬ್ಬರು ಅಜ್ಜಿಯರು ಹಾಗೂ ಅವರ ಸಹೋದರನನ್ನು ದಾಂಡೇಲಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಮೊಮ್ಮಗನಿಗೆ ಸೋಂಕು ಬಂದಂತೆ ತಮಗೂ ಬಂದಿದೆ ಎಂದು ಭಾವಿಸಿ ವೃದ್ಧೆ ಖಿನ್ನತೆಗೊಳಗಾಗಿದ್ದರು. ಇದೇ ಕಾರಣಕ್ಕೆ ವೃದ್ಧೆ ಇಂದು ಐಸೋಲೇಟೆಡ್ ವಾರ್ಡಿನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಬಗ್ಗೆ ತಿಳಿದ ತಕ್ಷಣ ಸ್ಥಳಕ್ಕೆ ದಾಂಡೇಲಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ದಾಂಡೇಲಿ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಗುರುವಾರ ಒಂದೇ ದಿನ ಉತ್ತರ ಕನ್ನಡದಲ್ಲಿ 7 ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿತ್ತು. ಈವರೆಗೆ ಉತ್ತರ ಕನ್ನಡದಲ್ಲಿ 63 ಮಂದಿ ಸೋಂಕಿಗೆ ತುತ್ತಾಗಿದ್ದು, 12 ಮಂದಿ ಗುಣಮುಖರಾಗಿದ್ದಾರೆ, 51 ಮಂದಿ ಈಗಲೂ ಸೋಂಕಿತಿನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.