– ನಾನು ಕೊನೆಯವರೆಗೂ ಹೋರಾಡುತ್ತೇನೆ
ಕೋಲ್ಕತ್ತಾ: ಮೊಬೈಲ್ ಚಾರ್ಜರ್ ವಯರ್ನಿಂದ ಪತಿಯ ಕತ್ತು ಬಿಗಿದು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ವಕೀಲೆಗೆ ಪಶ್ಚಿಮ ಬಂಗಾಳದ ಪ್ರಥಮ ದರ್ಜೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ವಕೀಲೆ ಅನಿಂದಿತಾ ಪಾಲ್ಗೆ ಶಿಕ್ಷೆಗೆ ಒಳಗಾಗಿದ್ದು, ಜೀವಾವಧಿ ಶಿಕ್ಷೆ ಮತ್ತು 10,000 ರೂಪಾಯಿ ದಂಡ ವಿಧಿಸಲಾಗಿದೆ. ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ತ್ವರಿತ ನ್ಯಾಯಾಲಯವು ವಕೀಲೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಪರಾಧಿ ಸಾಕ್ಷ್ಯಗಳ ನಾಶಕ್ಕೂ ಕಾರಣ ಆಗಿದ್ದಾಳೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿಭಾಸ್ ಚಟರ್ಜಿ, ಇದು ಪೂರ್ವನಿಯೋಜಿತ ಕೊಲೆ ಎಂದು ಆರೋಪಿಸಿ ಮರಣದಂಡನೆ ಶಿಕ್ಷೆ ವಿಧಿಸುವಂತೆ ವಾದ ಮಾಡಿಸಿದ್ದರು. ಆದರೆ ಅಪರಾಧಿ ಮೂರು ವರ್ಷದ ಮಗುವನ್ನು ಹೊಂದಿದ್ದರಿಂದ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ ಪ್ರತ್ಯಕ್ಷ ದರ್ಶಿಗಳಿಲ್ಲದ ಕಾರಣ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಆಕೆಯನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ.
ನ್ಯಾಯಾಲಯದಿಂದ ಅನಿಂದಿತಾಳನ್ನು ಜೈಲು ವ್ಯಾನ್ಗೆ ಕರೆದುಕೊಂಡು ಹೋಗುತ್ತಿದ್ದಾಗ “ನಾನು ಕೊನೆಯವರೆಗೂ ಈ ಪ್ರಕರಣದಲ್ಲಿ ಹೋರಾಡುತ್ತೇನೆ” ಎಂದು ಹೇಳಿದ್ದಾಳೆ.
ಏನಿದು ಪ್ರಕರಣ?
ವಕೀಲೆಯಾಗಿದ್ದ ಅನಿಂದಿತಾ ಪಾಲ್, ರಜತ್ ಡೇ ಜೊತೆ ವಿವಾಹವಾಗಿದ್ದಳು. ಪತಿಯೂ ಕೂಡ ವಕೀಲರಾಗಿದ್ದರು. ಆದರೆ 2018ರ ನವೆಂಬರ್ 24 ಮಧ್ಯರಾತ್ರಿ ಕೊಲ್ಕತ್ತಾದ ತಮ್ಮ ನ್ಯೂ ಟೌನ್ ಫ್ಲ್ಯಾಟ್ನಲ್ಲಿ ಮೊಬೈಲ್ ಫೋನ್ ಚಾರ್ಜರ್ ವಯರ್ನಿಂದ ಪತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ದಂಪತಿಯ ಮಧ್ಯೆ ವೈಮನಸ್ಸು ಉಂಟಾಗಿತ್ತು. ಇದೇ ರಜತ್ ಡೇ ಕೊಲೆಗೆ ಕಾರಣವಾಗಿತ್ತು.
ಅನಿಂದಿತಾ ಬೇರೆ ರೂಮಿನಲ್ಲಿ ಮಲಗಿದ್ದಳು. ಆಗ ಪತಿಯ ರೂಮಿನಿಂದ ಏನೋ ಶಬ್ದ ಕೇಳಿದಾಗ ಓಡಿ ಹೋಗಿ ನೋಡಿದ್ದಳು. ಆಗ ಆಕೆಯ ಪತಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಅನಿಂದಿತಾ ಪಾಲ್ ಪರ ವಕೀಲ ಪಿನಾಕ್ ಮಿತ್ರಾ ವಾದ ಮಂಡಿಸಿದ್ದರು.
ರಜತ್ ಡೇ ಅವರ ತಂದೆ ಅನಿಂದಿತಾ ಪಾಲ್ ತನ್ನ ಮಗನನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿ ಎಫ್ಐಆರ್ ದಾಖಲಿಸಿದ್ದರು. ನಂತರ ಪೊಲೀಸರು ವಿಚಾರಣೆ ಮಾಡಿ ನವೆಂಬರ್ 29 ರಂದು ಆಕೆಯನ್ನು ಬಂಧಿಸಿದ್ದರು. ಈ ಪ್ರಕರಣದ ವಿಚಾರಣೆ ಮತ್ತು ವಾದಗಳು ಈ ವರ್ಷದ ಮಾರ್ಚ್ ನಲ್ಲಿ ಪೂರ್ಣಗೊಂಡಿತ್ತು. ಅಪರಾಧಿ ಅನಿಂದಿತಾ ಪಾಲ್ ಮತ್ತು ಅವರ ಪತಿ ಇಬ್ಬರೂ ಕೋಲ್ಕತ್ತಾ ಹೈಕೋರ್ಟ್ನಲ್ಲಿ ಕಾನೂನು ಅಭ್ಯಾಸ ಮಾಡುತ್ತಿದ್ದರು.