ಚಿಕ್ಕಮಗಳೂರು: ನಿಮ್ಮ ಮೊಬೈಲ್ ನಂಬರಿಗೆ ಗಿಫ್ಟ್ ಬಂದಿದೆ, 1,500 ರೂ. ಹಣ ಹಾಕಿ ಮೊಬೈಲ್ ಕಳಿಸುತ್ತೇವೆ ಎಂದು ವ್ಯಕ್ತಿಗೆ ದೋಖಾ ಮಾಡಲಾಗಿದೆ.
ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರ್ ಗ್ರಾಮದ ವ್ಯಕ್ತಿ ಇದೀಗ ಹಣ ಕಳೆದುಕೊಂಡು ಪರಿತಪ್ಪಿಸುತ್ತಿದ್ದಾರೆ. ನೆಮ್ಮಾರು ಗ್ರಾಮದ ಶಾಮರಾಯ ಎಂಬುವರಿಂದ 1,500 ರೂಪಾಯಿ ಹಣವನ್ನ ಕಟ್ಟಿಸಿಕೊಂಡು ಖಾಲಿ ಡಬ್ಬದಲ್ಲಿ ಒಂದು ಸರದ ಜೊತೆ ಪೇಪರ್ ತುಂಬಿ ಕಳಿಸಿದ್ದಾರೆ. ಗುಡ್ ವಿಲ್ ಎಂಟರ್ ಪ್ರೈಸ್, ಕೊಡಿಗೆಹಳ್ಳಿ ಬೆಂಗಳೂರು ವಿಳಾಸದಿಂದ ಪಾರ್ಸೆಲ್ ಕಳುಹಿಸಲಾಗಿದೆ.
ಸದ್ಯ ಹಣ ನೀಡಿ ಮೋಸ ಹೋದ ವ್ಯಕ್ತಿ ತನ್ನನ್ನು ವಂಚಿಸಿದ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವಲತ್ತು ತೋಡಿಕೊಂಡಿದ್ದಾರೆ. ನಾವು ಬೀದಿ ವ್ಯಾಪಾರಿಗಳು. ನಮ್ಮಂಥ ಬೀದಿ ವ್ಯಾಪಾರಿಗಳಿಗೆ ಗುಡ್ವಿಲ್ ಅನ್ನೋ ಕಂಪನಿ ಹೀಗೆ ಮೋಸ ಮಾಡಿದೆ. ಮೊಬೈಲ್ ಕೊಡುತ್ತೇವೆ ಎಂದೇಳಿ, ಒಂದು ಪೇಪರ್ ಹಾಗೂ ಸಂತೆಯಲ್ಲಿ ಮಾರುವ ಸರ ಕೊಟ್ಟಿದ್ದಾರೆ. ಆ ಕಂಪನಿ ವಿರುದ್ಧ ಸೂಕ್ತ ಕ್ರಮಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದು, ನನಗೆ ಮೋಸ ಆದಂತೆ ಬೇರೆಯವರಿಗೆ ಮೋಸ ಆಗಬಾರದು ಎಂದು ಕೇಳಿಕೊಂಡಿದ್ದಾರೆ.
ಕೊರೊನಾ ಬಂದು ಈಗಾಗಲೇ ನಮ್ಮ ಬದುಕು ಮತ್ತಷ್ಟು ದುಸ್ತರವಾಗಿದೆ. ಆದರೂ ಮೊಬೈಲ್ ಕೊಡ್ತಾರೆಂದು ಹಣ ಹಾಕಿದ್ದೇವೆ. ಸೆಪ್ಟೆಂಬರ್ 8ನೇ ತಾರೀಖು ಬುಕ್ ಮಾಡಿದ್ದೇವೆ. ಇಂದು ಪಾರ್ಸೆಲ್ ಬಂದಿದ್ದು ಅದರಲ್ಲಿ ಪೇಪರ್ ಹಾಗೂ ಸಂತೆಯಲ್ಲಿ ಮಾರುವ ಸರ ಇದೆ ಎಂದು ಹಣಕಟ್ಟಿದವರು ಕಂಗಾಲಾಗಿದ್ದಾರೆ. ಹೀಗೆ ಮೋಸ ಮಾಡುವ ಬದಲು, ಯಾರದರೂ ತಲೆ ಹೊಡೆಯಲಿ ಎಂದು ಹಣ ಕಳೆದುಕೊಂಡವರು ಆಕ್ರೋಶದ ಮಾತುಗಳನ್ನಾಡಿದ್ದಾರೆ. ನಿಮಗೆ ಹಣ ಬೇಕಾ ಹೇಳಿ, ಕಷ್ಟವೋ-ಸುಖವೋ ನಾವೇ ಕೊಡುತ್ತೇವೆ. ಆದರೆ ಹೀಗೆ ಮೋಸ ಮಾಡಬೇಡಿ ಎಂದು ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.