ಮೈಸೂರು: ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಗೊಲ್ಲರಬೀದಿಯ ನಿವಾಸಿ ಜಯರಾಂ ಮಗಳನ್ನು ಹತ್ಯೆ ಮಾಡಿದ ತಂದೆ. ಗಾಯಿತ್ರಿ(19) ಅಪ್ಪನಿಂದ ಕೊಲೆಯಾದ ಯುವತಿ.
ಕೊಲೆಯಾದ ಗಾಯಿತ್ರಿ ಪಿರಿಯಾಪಟ್ಟಣದ ಮೆಡಿಕಲ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ ಪಟ್ಟಣದ ಉಪ್ಪಾರಗೇರಿ ಬಡಾವಣೆಯ ಯುವಕನನ್ನು ಪ್ರೀತಿಸುತ್ತಿದ್ದಳು. ಅವನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಈ ವಿಷಯವಾಗಿ ಒಂದು ತಿಂಗಳಿನಿಂದ ಮನೆಯಲ್ಲಿ ಪೋಷಕರು ಮತ್ತು ಯುವತಿಯ ನಡುವೆ ಗಲಾಟೆ ನಡೆಯುತ್ತಿತ್ತು. ಇಂದು ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ತಂದೆಗೆ ಗಾಯತ್ರಿ ಊಟ ತೆಗೆದುಕೊಂಡು ಬಂದಿದ್ದಳು. ಇದನ್ನೂ ಓದಿ: ಆಪ್ತಮಿತ್ರನ ಕಳೆದುಕೊಂಡ ದುಃಖ- ನೀನಾಸಂ ಸತೀಶ್ ಹುಟ್ಟುಹಬ್ಬ ಆಚರಣೆ ಕ್ಯಾನ್ಸಲ್
ಈ ವೇಳೆ ಮಗಳೊಂದಿಗೆ ಮಾತನಾಡಿದ ಜಯರಾಂ, ಮಗಳಿಗೆ ಬುದ್ಧಿಮಾತು ಹೇಳಿದ್ದರು. ಪ್ರೀತಿಸುತ್ತಿರುವ ಯುವಕನನ್ನು ಬಿಟ್ಟು ಬಿಡುವಂತೆ ಒತ್ತಾಯಿಸಿದ್ದಾರೆ. ನಾನು ಬಿಡುವುದಿಲ್ಲ ಏನು ಮಾಡುತ್ತೀಯ ಎಂದು ಗಾಯಿತ್ರಿ ಅಪ್ಪನನ್ನು ಪ್ರಶ್ನಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಜಯರಾಂ, ಮಗಳನ್ನು ಕೊಂದೇ ಬಿಟ್ಟಿದ್ದಾನೆ.
ಘಟನೆಯ ಬಳಿಕ ಆರೋಪಿಯು ಪಟ್ಟಣದ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಈ ಸಂಬಂಧ ಪಿರಿಯಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.