– 12 ಸ್ಥಾನ ಜಿಟಿಡಿ ಬಣಕ್ಕೆ, 3 ಸ್ಥಾನ ಎಚ್ಡಿಕೆ ಬಣಕ್ಕೆ
– ಹಾಲಿ ಅಧ್ಯಕ್ಷರಿಗೆ ಸೋಲು
ಮೈಸೂರು: ಪ್ರತಿಷ್ಠೆಯ ಕಾಳಗವಾಗಿದ್ದ ಮೈಮುಲ್(ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ) ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಣಕ್ಕೆ ಹಿನ್ನಡೆಯಾಗಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಬಣ ಭರ್ಜರಿ ಗೆಲುವು ಸಾಧಿಸಿದೆ.
ಒಟ್ಟು 15 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಜಿಟಿಡಿ ಬಣ ಗೆದ್ದರೆ 3 ಸ್ಥಾನಗಳಿಗೆ ಹೆಚ್ಡಿಕೆ ಬಣ ಸಮಾಧಾನ ಪಟ್ಟುಕೊಂಡಿದೆ. ಆದರೆ ಅಧ್ಯಕ್ಷ ಸ್ಥಾನ ಎಚ್ಡಿಕೆ ಬಣದ ಪಾಲಾಗಿದೆ. ಹಾಲಿ ಅಧ್ಯಕ್ಷ ಜಿಟಿಡಿ ಆಪ್ತ ಮಾವನಹಳ್ಳಿ ಸಿದ್ದೇಗೌಡ ಅವರಿಗೆ ಸೋಲಾಗಿದೆ.
ಹುಣಸೂರು ಉಪವಿಭಾಗದ ಎಂಟಕ್ಕೆ ಎಂಟೂ ಸ್ಥಾನಗಳಲ್ಲಿ ಜಿಟಿಡಿ ಬಣ ಗೆದ್ದಿದ್ದು, ಮಾಜಿ ಸಚಿವ ಎಚ್.ಡಿ.ರೇವಣ್ಣ ಸಂಬಂಧಿ ಪಿರಿಯಾಪಟ್ಟಣ ಶಾಸಕ ಮಹದೇವು ಪುತ್ರನಿಗೆ ಸೋಲಾಗಿದೆ. ಎಚ್.ಡಿ.ಕುಮಾರಸ್ವಾಮಿ ಪ್ರಚಾರದ ನಡುವೆಯೂ ಪ್ರಸನ್ನ ಗೆದ್ದಿದ್ದಾರೆ.
ಜಿಟಿಡಿ ಹಾಗೂ ಮಾಜಿ ಕುಮಾರಸ್ವಾಮಿಗೆ ಪ್ರತಿಷ್ಠೆಯಯಾಗಿದ್ದ ಈ ಚುನಾವಣೆಯ ಒಟ್ಟು 1,052 ಮತದಾರರ ಪೈಕಿ 1,051 ಸದಸ್ಯರು ಮತದಾನ ಮಾಡಿದ್ದರು.
ಪರಾಜಿತ ಅಭ್ಯರ್ಥಿ ಕೆ.ಎಸ್.ಮಧುಚಂದ್ರ ಪ್ರತಿಕ್ರಿಯಿಸಿ, ನಾವು ಪೂರ್ವಭಾವಿ ಸಿದ್ದತೆ ಇಲ್ಲದೆ ಚುನಾವಣೆ ಹೋಗಿದ್ದೇವು. ಜಿ.ಟಿ.ದೇವೇಗೌಡರು ಮೈಸೂರು ಸಹಕಾರಿ ಧುರೀಣ ಎಂಬುದು ಸಾಬೀತಾಗಿದೆ. ಇದು ಜೆಡಿಎಸ್ ಪಕ್ಷದ ಸೋಲಲ್ಲ. ಇದು ನನ್ನ ವೈಯುಕ್ತಿಕ ಸೋಲು. ರೇವಣ್ಣರವರು ನನ್ನ ಬಾವ ಇರಬಹುದು. ಪಕ್ಷದ ಮುಖಂಡರಾಗಿ ನನ್ನ ಪರವಾಗಿ ಪ್ರಚಾರ ಮಾಡಿದ್ದಾರೆ. ಹುಣಸೂರು ವಿಭಾಗದಲ್ಲಿ ನಮ್ಮ ಬಣದವರು ಯಾರು ಗೆದ್ದಿಲ್ಲ ಎಂದು ತಿಳಿಸಿದರು.