ಬೆಂಗಳೂರು: ಲಾಕ್ಡೌನ್ ಪಾಲಿಸದ ಜನರಿಂದ ಲಾಕ್ಡೌನ್ ಪದೇ ಪದೇ ವಿಸ್ತರಣೆಯಾಯಿತು. ಈ ಕಾರಣಗಳಿಂದ ಮತ್ತೆ ವಿಸ್ತರಣೆ ಮಾಡುವುದರಲ್ಲಿ ಅರ್ಥ ಇಲ್ಲ ಎಂದು ಹೇಳುವ ಮೂಲಕ ಸಚಿವ ಸಿ.ಟಿ.ರವಿ ಮೇ 17ರ ನಂತರ ಲಾಕ್ಡೌನ್ ತೆರವು ಸುಳಿವು ನೀಡಿದ್ದಾರೆ.
ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯಲ್ಲಿ ಬಡವರಿಗೆ ತರಕಾರಿ ಕಿಟ್ ವಿತರಣೆ ಮಾಡಲಾಯಿತು. ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಕ್ಷೇತ್ರದ ಜನರಿಗೆ ವಿತರಣೆ ಮಾಡಿದರು. ಮಾಜಿ ಶಾಸಕ ಮುನಿರಾಜು ನೇತೃತ್ವದಲ್ಲಿ 10 ಸಾವಿರ ಜನರಿಗೆ ಕಿಟ್ ವಿತರಣೆ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಿ.ಟಿ.ರವಿ, ಕೊರೊನಾ ಚೈನ್ ಬ್ರೇಕ್ ಮಾಡಲಿಕ್ಕೆ ಲಾಕ್ಡೌನ್ ಪ್ರಯೋಗ ಮಾಡಿದ್ದು, ಆದರೆ ಎಲ್ಲರೂ ಸರಿಯಾಗಿ ಲಾಕ್ಡೌನ್ ನಿಯಮ ಪಾಲನೆ ಮಾಡಲಿಲ್ಲ. ಈ ಕೊರೊನಾ ಬರುತ್ತೆ ಅಂತ ನಾವು ನಿರೀಕ್ಷೆ ಮಾಡಿರಲಿಲ್ಲ. ಲಾಕ್ಡೌನ್ ಪಾಲಿಸದ ಜನರಿಂದ ಲಾಕ್ಡೌನ್ ಪದೇ ಪದೇ ವಿಸ್ತರಣೆಯಾಯಿತು. ಈ ಕಾರಣಗಳಿಂದ ಮತ್ತೆ ವಿಸ್ತರಣೆ ಮಾಡುವುದರಲ್ಲಿ ಅರ್ಥ ಇಲ್ಲ. ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ಉದ್ದಿಮೆದಾರನವರೆಗೆ ಬಡತನ ಇದೆ. ಹೀಗಾಗಿ ಲಾಕ್ಡೌನ್ ನಿರ್ಬಂಧ ತೆರವಿನ ಸೂಚನೆ ಸಿಕ್ಕಿದೆ ಎಂದು ಹೇಳುವ ಮೂಲಕ ಮೇ 17ರ ನಂತರ ಲಾಕ್ಡೌನ್ ತೆರವು ಸುಳಿವು ನೀಡಿದರು.
ನಮ್ಮ ರಾಜ್ಯದಲ್ಲಿ ಒಳ್ಳೆಯ ಪ್ರವಾಸಿ ತಾಣಗಳು ಇವೆ. ಆದರೆ ಕೊರೊನದಿಂದಾಗಿ ಪ್ರವಾಸಕ್ಕೆ ತೊಂದರೆಯಾಗಿದೆ. 6 ತಿಂಗಳಿನಿಂದ ಒಂದು ವರ್ಷ ನಮ್ಮ ಇಲಾಖೆ ಚೇತರಿಸಿಕೊಳ್ಳಲು ಕಷ್ಟ, ನನ್ನ ಬಳಿ ಇರುವ ಮೂರು ಇಲಾಖೆಗಳು ಸಂತೃಪ್ತಿ ಸಮಯದಲ್ಲಿ ನಡೆಯುವ ಇಲಾಖೆಗಳು. ಆದರೆ ಕೊರೊನಾ ವೈರಸ್ನಿಂದಾಗಿ ಸಾಕಷ್ಟು ಸಮಸ್ಯೆಯಾಗಿದೆ ಎಂದು ಸಿ.ಟಿ.ರವಿ ತಿಳಿಸಿದರು.