ನವದೆಹಲಿ: ಪಶ್ಚಿಮ ಕರಾವಳಿ ಭಾಗದಲ್ಲಿ ಭಾರೀ ಹಾನಿ ಉಂಟು ಮಾಡಬಹುದು ಎಂದು ನಿರೀಕ್ಷಿಸಲಾಗಿರುವ ತೌಕ್ತೆ ಚಂಡಮಾರುತ ಮೇ 16 ರಂದು ಕೇರಳ ಕಡಲ ತೀರಕ್ಕೆ ಅಪ್ಪಳಿಸಲಿದೆ.
ಗಂಟೆಗೆ 160 ಕಿ.ಮೀ ವೇಗದಲ್ಲಿ ಬರುವ ಚಂಡಮಾರುತ ಕಳೆದ 2 ದಶಕದಲ್ಲಿ ಅರಬ್ಬಿ ಸಮುದ್ರ ಭಾಗದಲ್ಲಿ ಅಪ್ಪಳಿಸಲಿರುವ ದೊಡ್ಡ ಚಂಡ ಮಾರುತದಲ್ಲಿ ಒಂದಾಗಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ತೌಕ್ತೆ ಚಂಡಮಾರುತ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕ ಸೇರಿ ಐದು ರಾಜ್ಯಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಣಾ ಪಡೆಯ (ಎನ್ಡಿಆರ್ಎಫ್) 53 ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಅರಬ್ಬಿ ಸಮುದ್ರದ ಪೂರ್ವಭಾಗದಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಕೇರಳ, ಕರ್ನಾಟಕದಲ್ಲಿ ಸಮುದ್ರದಲ್ಲಿ ಎತ್ತರದ ಅಲೆಗಳು ಏಳತೊಡಗಿದೆ.
ಕರ್ನಾಟಕ ವರದಿ: ರಾಜ್ಯದಲ್ಲಿ 4 ದಿನಗಳ ಕಾಲ(ಮೇ 13 -16) ವ್ಯಾಪಕ ಮಳೆಯ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ. ಅರಬ್ಬೀ ಸಮುದ್ರವನ್ನು ಅಪ್ಪಳಿಸಲಿರುವ ಚಂಡಮಾರುತದಿಂದ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಬೆಂಗಳೂರು ನಗರ, ಗ್ರಾಮೀಣ ಜಿಲ್ಲೆಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇದನ್ನು ಓದಿ: ತೌಕ್ಟೆ ಚಂಡಮಾರುತ- ಮರವಂತೆಯಲ್ಲಿ ಕಡಲ್ಕೊರೆತ, ಹಲವು ತೆಂಗಿನ ಮರಗಳು ನೀರು ಪಾಲು
ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಏಳುವ ಸಾಧ್ಯತೆಯಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮತ್ತು ಈಗಾಗಲೇ ಸಮುದ್ರ ತೀರದಲ್ಲಿ ಮೀನುಗಾರಿಕೆಗೆ ಹೋಗಿರುವವರು ದಡ ಸೇರುವಂತೆ ಕರಾವಳಿ ಭದ್ರತಾ ಪಡೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.