ಮೇಲಿಂದ ಮೇಲೆ ಕುಸಿಯುತ್ತಿರೋ ಬೆಟ್ಟ-ಗುಡ್ಡ, ಆತಂಕದಲ್ಲಿ ಮಲೆನಾಡು

Public TV
1 Min Read
CKM BETTA KUSITA

ಚಿಕ್ಕಮಗಳೂರು: ಮಳೆ ಆರಂಭಕ್ಕೂ ಮುನ್ನವೇ ಮಲೆನಾಡಲ್ಲಿ ಮೇಲಿಂದ ಮೇಲೆ ಗುಡ್ಡದೊಳಗಿಂದ ವಿಚಿತ್ರ ಶಬ್ಧ ಕೇಳಿಸುತ್ತಿದ್ದು, ಬೆಟ್ಟ-ಗುಡ್ಡಗಳು ಬಾಯ್ಬಿಡ್ತಾ ಕುಸಿಯುತ್ತಿರೋದು ಮಲೆನಾಡಿಗರಿಗೆ ಆತಂಕ ಮೂಡಿಸಿದೆ.

ಕಳೆದೊಂದು ವಾರದ ಹಿಂದಷ್ಟೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಆನೆಗುಡ್ಡದಲ್ಲಿ ಭಾರೀ ಶಬ್ಧ ಕೇಳಿ ಬಂದಿತ್ತು. ಶಬ್ಧ ಕೇಳಿ ಜನ ಕಂಗಾಲಾಗಿದ್ದರು. ಮರುದಿನ ಸ್ಥಳೀಯರು ಬೆಟ್ಟ ಹತ್ತಿ ನೋಡಿದಾಗ ಆನೆಗುಡ್ಡದಲ್ಲಿ ಅಲ್ಲಲ್ಲಿ ಬೆಟ್ಟ ಬಿರುಕು ಬಿಟ್ಟಿತ್ತು. ಬೆಟ್ಟದಲ್ಲಿದ್ದ ಬೃಹತ್ ಕಲ್ಲುಗಳು ಜಾರಿದ್ದವು. ಇದನ್ನ ಕಣ್ಣಾರೆ ಕಂಡ ಸ್ಥಳೀಯರು ಭವಿಷ್ಯದ ಬಗ್ಗೆ ಆತಂಕಕ್ಕೀಡಾಗಿದ್ದರು.

CKM A 1

ಗುಡ್ಡದೊಳಗಿಂದ ಭಾರೀ ಶಬ್ಧ ಕೇಳಿ ಬಂದಿದ್ದರಿಂದ ಈ ಗುಡ್ಡದ ಸುತ್ತಮುತ್ತಲಿನ ಸುಮಾರು 15 ಹಳ್ಳಿಗಳ ಜನ ಬದುಕಿನ ಬಗ್ಗೆ ಯೋಚಿಸುವಂತಾಗಿದೆ. ಭಾನುವಾರವೂ ಕಳಸ ಸಮೀಪದ ಕುದುರೆಮುಖದ ಜಾಂಬಳೆ ಬಳಿಯ ಕಟ್ಟಿನವಾರೆಯಲ್ಲಿ ಗುಡ್ಡದ ತುದಿಯಲ್ಲಿ ಕುಸಿತವಾಗಿದೆ. ಈ ಗುಡ್ಡದ ಹಾಸುಪಾಸಿನಲ್ಲಿರುವ ಗ್ರಾಮಗಳ ಜನ ಗಾಬರಿಗೊಂಡಿದ್ದಾರೆ. ಈ ಬೆಟ್ಟದ ತಪ್ಪಲ್ಲಿನಲ್ಲಿರೋ ನಾಲ್ಕೈದು ಮನೆಗಳ ಜನ ಜೀವ ಕೈಯಲ್ಲಿಡಿದು ಬದುಕುವಂತಾಗಿದೆ.

ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಈ ಗುಡ್ಡವು ಕುಸಿದಿರುವುದರಿಂದ ಜನ ಕಂಗಾಲಾಗಿದ್ದಾರೆ. ಮೂಡಿಗೆರೆಯ ಈ ಭಾಗ ಅಪ್ಪಟ ಮಲೆನಾಡು. ವಾರ್ಷಿಕ ದಾಖಲೆ ಮಳೆ ಬೀಳುವ ಪ್ರದೇಶ. ನಾಡಿಗೆ ಜೀವನಾಡಿಯಾಗಿರೋ ತುಂಗಾ-ಭದ್ರಾ ಎರಡೂ ನದಿಗಳು ಜನ್ಮ ತಾಳುವುದು ಇದೇ ಭಾಗದಲ್ಲಿ. ಈಗ ಇಲ್ಲೇ ಭೂಮಿಯೊಳಗಿಂದ ಶಬ್ಧ ಕೇಳುತ್ತಿತ್ತು. ಬೆಟ್ಟ-ಗುಡ್ಡಗಳು ಕುಸಿಯುತ್ತಿರುವುದರಿಂದ ನೂರಾರು ವರ್ಷಗಳಿಂದ ಇಲ್ಲೇ ಬದುಕು ಕಟ್ಟಿಕೊಂಡಿರುವ ಮಲೆನಾಡಿಗರಿಗೆ ದಾರಿಕಾಣದಂತಾಗಿದೆ.

CKM 6

ಕಳೆದ ಎರಡು ವರ್ಷಗಳ ಮಳೆಯಿಂದಾದ ಅವಾಂತರಗಳನ್ನು ಮರೆಯುವ ಮುನ್ನವೇ ಮಲೆನಾಡಿಗರಿಗೆ ಮಳೆಗಾಲಕ್ಕೂ ಮುನ್ನವೇ ಪ್ರಕೃತಿ ಹೊಸದೊಂದು ಬಗೆಯ ಭಯ ತರಿಸಿದೆ. ಮಳೆಗಾಲಕ್ಕೂ ಮೊದಲೇ ಈ ರೀತಿಯ ಅನಾಹುತ ಗೋಚರವಾಗುತ್ತಿರುವುದರಿಂದ ಕಳೆದ ವರ್ಷದಂತೆ ಈ ವರ್ಷವೂ ಮಳೆ ಸುರಿದು ನಮ್ಮ ಬದುಕು ಮತ್ತೊಮ್ಮೆ ನೀರಿನಲ್ಲಿ ತೊಯ್ದು ಹೋಗುತ್ತಾ, ಬೆಟ್ಟಗುಡ್ಡಗಳು ಕುಸಿದು ಮನೆ-ಮಠ ಕಳೆದುಕೊಳ್ಳುತ್ತೇವಾ ಎನ್ನುವ ಆತಂಕ ಮಲೆನಾಡಿಗರದ್ದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *