– ನಮ್ಮಂತವರೆಲ್ಲ ಹೋದರೂ ನಡೆಯುತ್ತೆ
ಬೆಂಗಳೂರು: ಪತಿ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡು ತೀವ್ರ ದುಃಖದಲ್ಲಿರುವ ನಟಿ ಮೇಘನಾ ರಾಜ್ ಸ್ಥಿತಿ ನೆನಪಿಸಿಕೊಂಡು ಹಿರಿಯ ನಟಿ ಉಮಾ ಶ್ರೀ ಮರುಕ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಮಾಶ್ರೀ, ಚಿರು- ಮೇಘನಾ ಇಬ್ಬರೂ ಪ್ರೀತಿ ಮಾಡಿ ಮದುವೆಯಾದರು. ಇಂದು ಆ ಹುಡುಗಿಗೆ ಜೀವನಾ ಇಷ್ಟೆನಾ, ಮುಗಿದೇ ಹೋಯ್ತಾ ನನ್ನ ಜೀವನ ಅನ್ನೋವಂತದ್ದು ದುಃಖಕರವಾದ ಸಂಗತಿ. ನಿಜವಾಗಲೂ ಬಹಳ ದುಃಖವಾಗುತ್ತಿದೆ ಎಂದು ಕಣ್ಣೀರು ಹಾಕಿದರು.
ನಟ ಚಿರಂಜೀವಿ ಸರ್ಜಾ ಅವರು ಇನ್ನಿಲ್ಲ ಎಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ನನಗೆ ಬಹಳ ಶಾಕ್ ಆಗಿತ್ತು. ಸಣ್ಣ ವಯಸ್ಸಿನಲ್ಲಿ ಮರಣ ಹೊಂದಿರುವುದು ನನ್ನನ್ನು ಬಹಳ ಗಾಬರಿಗೆ ಒಳಪಡಿಸಿದೆ. ದೇವರು ಯಾಕೆ ಇಂತಹ ಒಳ್ಳೆಯ ಟ್ಯಾಲೆಂಟ್ ಇರೋವವರನ್ನು ಕರೆದುಕೊಳ್ಳುತ್ತಾನೆಂದು ಬೇಸರವಾಗತ್ತಿದೆ ಎಂದು ಹೇಳಿದರು.
ನನ್ನ ಮಗು ಮೇಘಾನಾಗೆ ಇದು ದೊಡ್ಡ ಶಾಕ್, ಅವಳು ಹೇಗೆ ತಡೆದುಕೊಳ್ಳುತ್ತಾಳೆ ಪಾಪ. ಪ್ರೀತಿಸಿ ಮದುವೆಯಾದವರು ಚಿರು ಇಲ್ಲದೆ ಅವರು ಹೇಗೆ ಬದುಕೋದು. ಪ್ರೀತಿ ಅನ್ನೋದು ಅದನ್ನು ಅನುಭವಿಸಿದವರಿಗೇ ಗೊತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಚೆನ್ನಾಗಿ ಬದುಕಿ ಬಾಳಬೇಕಾದವರನ್ನು ಭಗವಂತ ಬೇಗನೇ ಕರೆಸಿಕೊಳ್ಳುತ್ತಾನೆ. ನಮ್ಮಂತವರೆಲ್ಲ ಹೋದರೂ ನಡೆಯುತ್ತೆ. ಆದರೆ ಇವರೆಲ್ಲ ಉಳಿಯಬೇಕು. ಇವರೆಲ್ಲ ನಮ್ಮ ಮಕ್ಕಳಿಗೆ ಸಮಾನರಾದವರು ಎಂದು ಕಣ್ಣೀರು ಹಾಕಿದ ಅವರು, ದೇವರು ಈ ರೀತಿಯ ಅನ್ಯಾಯ ಮಾಡಬಾರದು ಹಿಡಿಶಾಪ ಹಾಕಿದರು.
ಸರ್ಜಾ ಅವರ ಕುಟುಂಬದಲ್ಲಿ ಒಳ್ಳೋಳ್ಳೆಯ ಟ್ಯಾಲೆಂಟ್ ಗಳಿವೆ. ಧೃವ, ಚಿರು ಮತ್ತು ಅರ್ಜುನ್ ಉತ್ತಮ ಕಲಾವಿದರಾಗಿದ್ದಾರೆ. ಅಲ್ಲದೆ ಕನ್ನಡ ಚಿತ್ರಂಗಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡಿದ್ದಾರೆ. ಅವರು ಫಿಟ್ನೆಸ್ ಗೋಸ್ಕರ ಡಯೆಟ್, ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಲ್ಲವನ್ನೂ ಬಿಟ್ಟು ಹೋದರು. ತುಂಬಾನೆ ಬೇಸರವಾಗುತ್ತದೆ ಎಂದು ತಿಳಿಸಿದರು.
ಸದ್ಯ ಬಾಗಲಕೋಟೆ ಜಿಲ್ಲೆಯ ನನ್ನ ಕ್ಷೇತ್ರದಲ್ಲಿದ್ದು, ನನಗೆ ಏನೂ ಮಾಡಲಾಗಿದೆ ಪರಿಸ್ಥಿತಿಯಲ್ಲಿ ನಾನು ಸಿಕ್ಕಿಹಾಕಿಕೊಂಡಿದ್ದೇನೆ ಎಂದು ಉಮಾಶ್ರೀ ದುಃಖಿತರಾದರು.