– ಹಣ ಖಾತೆಗೆ ಬರುತ್ತಿದ್ದಂತೆ ವ್ಯಕ್ತಿ ನಾಪತ್ತೆ
ಶಿವಮೊಗ್ಗ: ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ, ಒಂದು ಲಕ್ಷ ರೂ. ಹಣ ಪಡೆದು ನಾಪತ್ತೆಯಾಗಿರುವ ಘಟನೆ ಶಿವಮೊಗ್ಗದ ಭದ್ರಾವತಿಯಲ್ಲಿ ನಡೆದಿದೆ.
ಮೆಡಿಕಲ್ ಸೀಟ್ ಕೊಡುವುದಾಗಿ ವಂಚಿಸಿರುವ ವ್ಯಕ್ತಿ ರಿತೇಷ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ಈತ ಕೋಲ್ಕತ್ತಾ ಮೂಲದವನಾಗಿದ್ದಾನೆ. ಮೋಸ ಹೋಗಿರುವವರು ರಫಿಕ್ ಅಹಮದ್ ಆಗಿದ್ದಾರೆ. ಇವರು ಭದ್ರಾವತಿಯ ಭೂತನಗುಡಿ ನಿವಾಸಿಯಾಗಿದ್ದಾರೆ.
ರಫಿಕ್ ಅಹಮದ್ ಅವರ ಮಗನಿಗೆ ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರಿ ಸೀಟ್ ಕೊಡಿಸುವುದಾಗಿ ವ್ಯಕ್ತಿ ನಂಬಿಸಿದ್ದನು. ಇದಕ್ಕೂ ಮೊದಲು ಮೆಡಿಕಲ್ ಕಾಲೇಜಿಗೆ ಸೀಟು ಕೊಡಿಸುವ ಬಗ್ಗೆ ಎಸ್.ಎಂ.ಎಸ್. ಕಳಿಸಿದ್ದನು. ಮೆಡಿಕಲ್ ಕಾಲೇಜು ಸೀಟ್ ಬೇಕಾದರೆ 6 ಲಕ್ಷ ರೂ. ನೀಡಬೇಕು ಎಂದು ಹೇಳಿದ್ದನು. ಆದರೆ ಸೀಟ್ ಕೊಡಿಸುವ ಮೊದಲು ಒಂದು ಲಕ್ಷ ರೂ. ತನ್ನ ಖಾತೆಗೆ ಹಾಕುವಂತೆ ಹೇಳಿದ್ದನು. ಸೀಟ್ ಕೊಡಿಸುತ್ತೇನೆ ಎಂದು ಹೇಳುತ್ತಾ ಯಾಮಾರಿಸಿ 1 ಲಕ್ಷ ರೂ. ಹಣವನ್ನು ಇವರಿಂದ ಪಡೆದುಕೊಂಡಿದ್ದನು.
ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೋಲ್ಕತ್ತಾ ಬ್ರಾಂಚ್ನ ಖಾತೆ ವಿವರವನ್ನು ನೀಡಿದ್ದನು. ಹಣ ತನ್ನ ಖಾತೆಗೆ ಬರುತ್ತಿದ್ದಂತೆ ರಿತೇಷ್ ಅಗರ್ವಾಲ್ ಕೂಡ ನಾಪತ್ತೆಯಾಗಿದ್ದಾನೆ. ರಫಿಕ್ ಅಹಮದ್ ತನ್ನ ಮಗನಿಗೆ ಮೇಡಿಕಲ್ ಸೀಟ್ ಕೊಡಿಸುವಂತೆ ಕರೆಮಾಡಿದ್ದಾರೆ. ಆದರೆ ಫೋನ್ ಕರೆಯನ್ನು ರಿತೇಷ್ ಅಗರ್ವಾಲ್ ಸ್ವೀಕರಿಸಿಲ್ಲ. ಆತಂಕಗೊಂಡ ರಫಿಕ್ ಅಹಮದ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.