ಕಲಬುರಗಿ: ರಾಜ್ಯದ ಯಾವ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇಲ್ಲ, ಅಂತಹ ಜಿಲ್ಲೆಗಳಿಗೆ ಪಕ್ಕದ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಚಿಕ್ಕಪಬಳ್ಳಾಪುರದವರಿಗೆ ಬೆಂಗಳೂರಿನ ಮೂರು ಆಸ್ಪತ್ರೆಗಳಲ್ಲಿ ಶೇಕಡಾ 15 ರಷ್ಟು ಬೆಡ್ ಮೀಸಲು ಸಂಬಂಧ ಪ್ರತಿಕ್ರಿಯಿಸಿ, ಈ ಹಿಂದೆ ಕೊರೊನಾ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಈ ಆರ್ಡರ್ ಆಗಿರಲಿಲ್ಲ. ಹೀಗಾಗಿ ನಾನು ಈಗ ಆರ್ಡರ್ ಮಾಡಿದ್ದೇನೆ. ಈ ಆದೇಶಕ್ಕೆ ಯಾವ ಸಚಿವರ ಬೇಸರ ಸಹ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಸರ್ಕಾರದ ವತಿಯಿಂದ ಎಲ್ಲಾ ಸರ್ಕಾರಿ ಲಸಿಕಾ ಕೇಂದ್ರಕ್ಕೆ ಉಚಿತವಾಗಿ ಕೊಡಲು ತೀರ್ಮಾನ ಮಾಡಿದ್ದೇವೆ. ಎರಡು ಕೋಟಿ ಡೋಸ್ ಗೆ ಆರ್ಡರ್ ಮಾಡಿದ್ದೇವೆ. ಇಂದು ಸಾಂಕೇತಿಕವಾಗಿ ಪ್ರಾರಂಭ ಮಾಡಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಲಸಿಕೆ ಇನ್ನೂ ಬಂದಿಲ್ಲಾ. ಯಾವಾಗ ಸರಬರಾಜು ಆಗುತ್ತದೆಯೋ ಆವಾಗ ಪ್ರಾರಂಭ ಮಾಡುತ್ತೇವೆ. ಕಂಪನಿಯವರು ಹೇಳಿದ ಮೇಲೆ ಸರಬರಾಜು ಮಾಡ್ತೇವೆ ಎಂದರು.
ಮೂರು ಲಕ್ಷ ಲಸಿಕೆ ಇದೀಗ ಕೊಟ್ಟಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಲಸಿಕೆ ಬಂದ ಮೇಲೆ ಲಸಿಕೆ ವಿತರಣೆ ಮಾಡ್ತೇವೆ. ಆದಷ್ಟು ಶೀಘ್ರದಲ್ಲಿ ರಾಜ್ಯದ ಜನರಿಗೆ ಲಸಿಕೆ ನೀಡ್ತೇವೆ. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಲಸಿಕೆ ನೀಡ್ತಿದೆ ಎಂದು ತಿಳಿಸಿದರು.
ಕೋವಿಡ್ ಸಂಖ್ಯೆ ಹೆಚ್ಚಾಗಿದೆ. ಎಂಬತ್ತರಷ್ಟು ಜನರು ಯಾವುದೇ ರೋಗದ ಲಕ್ಷಣ ಹೊಂದಿಲ್ಲ. ತೀವ್ರ ಸೋಂಕಿತ ಐದು ರಷ್ಟು ಜನರಿಗೆ ಬೆಡ್ ಅವಶ್ಯಕತೆ ಇದೆ. ಆದರೆ ಸೋಂಕು ಬಂದ ತಕ್ಷಣ ಬಹಳ ಜನರು ಆಸ್ಪತ್ರೆಗೆ ಹೋಗ್ತಿದ್ದಾರೆ. ಕೆಲವರು ಆಕ್ಸಿಜನ್ ಸಿಲಿಂಡರ್ ಮನೆಗೆ ತೆಗೆದುಕೊಂಡು ಹೋಗಿ ದಾಸ್ತಾನು ಮಾಡಿಕೊಳ್ತಿದ್ದಾರೆ ಅದು ಸರಿಯಲ್ಲಾ ಎಂದು ಗರಂ ಆದರು.
ಲಾಕ್ ಡೌನ್ ಇದ್ದರೂ ಕೆಲವರು ಅನಗತ್ಯವಾಗಿ ಓಡಾಡುತ್ತಿದ್ದಾರೆ. ಜನರು ಕೂಡಾ ಜವಾಬ್ದಾರಿಯನ್ನು ತೆಗೆದುಕೊಂಡರೆ ಬೇಗನೆ ಕೊರೊನಾ ನಿರ್ಮೂಲನೆ ಮಾಡಬಹದು. ಐದಾರು ದಿನ ಲಾಕ್ ಡೌನ್ ಗೆ ಕಂಟ್ರೋಲ್ ಬರೋದಿಲ್ಲ. ಸಂಪೂರ್ಣ ಲಾಕ್ ಡೌನ್ ಮಾಡುವ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದು ಸಚಿವರು ಹೇಳಿದರು.