-ಆಸ್ಪತ್ರೆಗೆ ದಾಖಲಾದ ಕುಟುಂಬಸ್ಥರು
ಲಕ್ನೋ: ಮೆಂತೆ ಸೊಪ್ಪು ಎಂದು ತಿಳಿದ ಕುಟುಂಬಸ್ಥರು ಗಾಂಜಾ ಸೊಪ್ಪನ್ನು ಬೇಯಿಸಿ ತಿಂದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರ ಪ್ರದೇಶದ ಕನ್ನೌಜ್ ನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕನ್ನೌಜ್ ಜಿಲ್ಲೆಯ ಕೋತವಾಲಿ ಕ್ಷೇತ್ರದ ಮಿಯಾಗಂಜ್ ಗ್ರಾಮದ ಕಿಶೋರ್ ಎಂಬಾತ ಓಂಪ್ರಕಾಶ್ ಎಂಬವರ ಪುತ್ರ ನಿತೇಶ್ಗೆ ಒಣಗಿಸಿದ ಮೆಂತೆ ಸೊಪ್ಪು ಎಂದು ಹೇಳಿ ನೀಡಿದ್ದಾನೆ. ಕಿಶೋರ್ ನೀಡಿದ ಸೊಪ್ಪನ್ನು ತೆಗದುಕೊಂಡು ನಿತೇಶ್ ಮನೆಯಲ್ಲಿ ಅತ್ತಿಗೆಗೆ ನೀಡಿದ್ದಾನೆ. ಸೊಪ್ಪು ಎಂದು ತಿಳಿದ ನಿತೇಶ್ ಅತ್ತಿಗೆ ಅದನ್ನ ಅಡುಗೆಯಲ್ಲಿ ಬಳಸಿದ್ದಾರೆ. ಗಾಂಜಾ ಸೊಪ್ಪಿನಿಂದ ಮಾಡಿದ ಅಡುಗೆ ಸೇವಿಸಿದ ಓಂ ಪ್ರಕಾಶ್, ನಿತೇಶ್, ಮನೋಜ್ ಕಮಲೇಶ್, ಪಿಂಕಿ ಮತ್ತು ಆರತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ದಿಢೀರ್ ಅಂತ ಕುಟುಂಬಸ್ಥರು ಅಸ್ವಸ್ಥಗೊಂಡಿದ್ದನ್ನ ಗಮನಿಸಿದ ನೆರೆಹೊರೆಯವರು ಎಲ್ಲರನ್ನ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮನೆಯಲ್ಲಿದ್ದ ಅಡುಗೆ ವಶಕ್ಕೆ ಪಡೆದುಕೊಂಡು ಲ್ಯಾಬ್ ಗೆ ಕಳುಹಿಸಿದ್ದಾರೆ. ಇತ್ತ ಮನೆಯಲ್ಲಿದ್ದ ಗಾಂಜಾ ಸೊಪ್ಪು ಸಿಕ್ಕಿದೆ. ಗಾಂಜಾ ನೀಡಿದ್ದ ಕಿಶೋರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.