ರಾಯಚೂರು: ಮೂರು ದಿನದಲ್ಲಿ 67 ಹಾವುಗಳ ರಕ್ಷಣೆಮಾಡಿ ರಾಯಚೂರಿನ ಉರಗ ತಜ್ಞರಿಂದ ಜನಜಾಗೃತಿಯನ್ನೂ ಮೂಡಿಸಿದ್ದಾರೆ.
ಸಾರ್ವಜನಿಕರ ಮಾಹಿತಿ ಮೇರೆಗೆ ಜಿಲ್ಲೆಯಾದ್ಯಂತ 8 ಜನ ಉರಗ ತಜ್ಞರು ಮೂರು ದಿನಗಳಲ್ಲಿ 67 ಹಾವುಗಳನ್ನ ಹಿಡಿದು ಸುರಕ್ಷಿತವಾಗಿ ನಗರದ ಹೊರವಲಯದ ಮಲಿಯಾಬಾದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಹಾವುಗಳನ್ನು ಕಾಡಿಗೆ ಬಿಡುವ ಮೂಲಕ ಜನ ಜಾಗೃತಿಯನ್ನೂ ಉರಗ ತಜ್ಞರು ಮಾಡಿದ್ದಾರೆ. ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಫ್ರೆಂಡ್ಸ್ ವೈಲ್ಡ್ ಲೈಫ್ ಸೊಸೈಟಿಯ ಉರಗ ತಜ್ಞ ಅಫ್ಸರ್ ಹುಸೇನ್ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಹಾವುಗಳನ್ನ ಹಿಡಿದು ಕಾಡಿಗೆ ಬಿಡಲಾಗಿದೆ. ಉರಗತಜ್ಞರಾದ ಸೋಹೆಲ್, ಉದಯ್, ಮುಕ್ತಿಯಾರ್ ಸೇರಿ 8 ಜನ 67 ಹಾವುಗಳನ್ನ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಉರಗ ತಜ್ಞ ಅಫ್ಸರ್ ಹುಸೇನ್ ಸೇರಿ ಒಟ್ಟು 28 ಜನರ ತಂಡ ಕಳೆದ 31 ವರ್ಷಗಳಿಂದ ಜಿಲ್ಲೆಯಲ್ಲಿ ಹಾವುಗಳ ರಕ್ಷಣೆ ಹಾಗೂ ಜಾಗೃತಿ ಕಾರ್ಯ ಮಾಡಿಕೊಂಡು ಬರುತ್ತಿದೆ.
ರಾಯಚೂರು ನಗರದಲ್ಲಿ ಹಾವಿನ ಉದ್ಯಾನವನ ನಿರ್ಮಿಸಿ, ಹಾವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ,ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಗುರಿಯನ್ನು ಫ್ರೆಂಡ್ಸ್ ವೈಲ್ಡ್ ಲೈಫ್ ಸೊಸೈಟಿ ಹೊಂದಿದೆ. ಎಲ್ಲಾ ಹಾವುಗಳು ವಿಷಕಾರಿಯಲ್ಲ ಹೀಗಾಗಿ ಹಾವುಗಳನ್ನ ಕೊಲ್ಲದೆ ರಕ್ಷಿಸಿ ಅರಣ್ಯಕ್ಕೆ ಬಿಡಬೇಕು. ಈ ಉದ್ದೇಶದಿಂದಲೇ ಕೆಲಸ ಮಾಡುತ್ತಿದ್ದೇವೆ ಅಂತ ಉರಗ ತಜ್ಞ ಅಫ್ಸರ್ ಹುಸೇನ್ ಹೇಳಿದ್ದಾರೆ.