ಬೆಂಗಳೂರು: ಕೋವಿಡ್ ಮೂರನೇ ಅಲೆಯ ಭೀತಿ ಶುರುವಾಗಿದ್ದು, ಮತ್ತೆ ಜನರ ನೆರವಿಗೆ ಟೊಂಕ ಕಟ್ಟಿ ನಿಲ್ಲುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಪಕ್ಷದ ಶಾಸಕರು, ಸಂಸದರು, ಮುಖಂಡರಲ್ಲಿ ಮನವಿ ಮಾಡಿದ್ದಾರೆ.
ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದವರನ್ನು ತಲುಪಲು ಕೈಗೊಳ್ಳಬೇಕಾದ ಅಭಿಯಾನದ ಬಗ್ಗೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಝೂಮ್ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೋವಿಡ್ ಒಂದು ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಜನರಿಗೆ ನೆರವಿನ ಹಸ್ತ ಚಾಚಿದ ಶಾಸಕರು, ಸಂಸದರು, ಮುಖಂಡರ ಕಾರ್ಯದ ಬಗ್ಗೆ ಸಿದ್ದರಾಮಯ್ಯ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಕೊರೊನಾದಿಂದ ಪಾರಾಗಲು ಲಸಿಕೆ ಹಾಕಿಸಿಕೊಳ್ಳುವುದೊಂದೇ ಮಾರ್ಗ. ಆದರೆ ಲಸಿಕೆ ನೀಡುವ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಡಿಸೆಂಬರ್ ವೇಳೆಗೆ ಎಲ್ಲರಿಗೂ ಲಸಿಕೆ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಕೆಲ ಜಿಲ್ಲೆಗಳಲ್ಲಿ ಲಸಿಕೆ ಸಿಗದೆ ಜನ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಆರಂಭಿಸಿದ ಲಸಿಕೆ ಅಭಿಯಾನ ನಿಂತಲ್ಲೇ ಇದೆ. ಆದರೆ, ನಮ್ಮ ಪಕ್ಷದ ಹಲವಾರು ಶಾಸಕರು ಜನರಿಗೆ ಉಚಿತವಾಗಿ ಲಸಿಕೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಅಗತ್ಯಕ್ಕೆ ಅನುಗುಣವಾಗಿ ಲಸಿಕೆ ನೀಡಿ ಜನರನ್ನು ಕೊರೊನಾ ಮುಕ್ತ ಮಾಡುವ ಕಾರ್ಯವನ್ನು ಸರ್ಕಾರ ಮಾಡಬೇಕು. ಈ ವಿಷಯದಲ್ಲಿ ಪಕ್ಷದ ವತಿಯಿಂದಲೂ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು.
ಎಐಸಿಸಿ ಸೂಚನೆ ಮೇರೆಗೆ ರಾಜ್ಯಾದ್ಯಂತ ಜನರನ್ನು ತಲುಪುವ ಅಭಿಯಾನವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಸಿದ್ದರಾಮಯ್ಯ ಅವರು ಮನವಿ ಮಾಡಿದರು. ಸರ್ಕಾರ ಘೋಷಣೆ ಮಾಡಿರುವ ಕೊರೊನಾ ಪ್ಯಾಕೇಜ್ ಜನರನ್ನು ತಲುಪಿಯೇ ಇಲ್ಲ. ಪರಿಹಾರ ಪಡೆಯುವ ಮಾರ್ಗ ತಿಳಿಯದೆ ಜನ ಪರದಾಡುತ್ತಿದ್ದಾರೆ. ಈ ಕುರಿತಾಗಿಯೂ ಶಾಸಕರು ಜನರಿಗೆ ನೆರವಾಗಬೇಕು.
ಕೊರೋನಾದ ಮೊದಲ ಮತ್ತು ಎರಡನೆ ಅಲೆಗಳು ದೇಶದ ಕೋಟ್ಯಾಂತರ ಜನರನ್ನು ಬಾಧಿಸಿ, ಲಕ್ಷಾಂತರ ಜನರನ್ನು ಕೊಂದು ಹಾಕಿವೆ. ಜೊತೆಗೆ ಎಲ್ಲ ದುಡಿಯುವ ವರ್ಗಗಳ ಬದುಕು ನೆಲಕಚ್ಚುವಂತೆ ಮಾಡಿವೆ. ಆದರೆ, ಸಂಕಷ್ಟಕ್ಕೆ ಒಳಗಾದವರ ಕೂಗು ಕೇಂದ್ರ, ರಾಜ್ಯ ಸರ್ಕಾರಕ್ಕೆ ಕೇಳಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಕೊರೊನಾದಿಂದ ಮರಣ ಹೊಂದಿದವರ ಕುಟುಂಬಗಳಿಗೆ ಕೇವಲ ಒಂದು ಲಕ್ಷ ಪರಿಹಾರ ಘೋಷಿಸಲಾಗಿದೆ. ಅದನ್ನು 5 ಲಕ್ಷ ರೂ.ಗಳಿಗೆ ಏರಿಸುವಂತೆ ಸರ್ಕಾರವನ್ನು ಒತ್ತಾಯಿಸುವುದರ ಜೊತೆಗೆ ಪರಿಹಾರ ಎಲ್ಲರಿಗೂ ಸಿಗುವಂತೆ ಮಾಡಬೇಕಿದೆ. ಕೊರೊನಾ ಸಾವಿನ ಸಂಖ್ಯೆಯನ್ನೂ ಸರ್ಕಾರ ಮುಚ್ವಿಡುತ್ತಿದ್ದು ಸುಳ್ಳು ಅಂಕಿ ಅಂಶ ತೋರಿಸುತ್ತಿದೆ. ಇದನ್ನು ಬಯಲಿಗೆಳೆಯುವ ಕೆಲಸವೂ ಆಗಬೇಕಿದೆ ಎಂದರು. ಇದನ್ನೂ ಓದಿ: ವಿಕಲಚೇತನರು ದೇವರ ಮಕ್ಕಳಿದ್ದಂತೆ: ಲಕ್ಷ್ಮೀ ಹೆಬ್ಬಾಳ್ಕರ್
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧ್ರುವ ನಾರಾಯಣ, ಈಶ್ವರ ಖಂಡ್ರೆ, ಸಲೀಂ ಅಹಮದ್ ಸೇರಿದಂತೆ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು, ಪಕ್ಷದ ಜಿಲ್ಲಾಧ್ಯಕ್ಷರು ಇತರ ಮುಖಂಡರು ಸಭೆಯಲ್ಲಿದ್ದರು. ಇದನ್ನೂ ಓದಿ: ನಮ್ಮ ಪಕ್ಷ ಅಧಿಕಾರಕ್ಕೆ ಬರಲ್ಲ: ಎಸ್.ಆರ್.ಶ್ರೀನಿವಾಸ್