ಬೆಂಗಳೂರು: ಸಾರಿಗೆ ನೌಕರರ ಪ್ರತಿಭಟನೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಈ ಮಧ್ಯೆ ಮುಷ್ಕರವನ್ನ ಹಿಂಪಡೆಯುವ ಆಲೋಚನೆ ಮಾಡಿರುವುದಾಗಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ವೈಯಾಲಿಕಾವಲ್ ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಉಪವಾಸ ಕಾರ್ಯಕ್ರಮದಲ್ಲಿ ಇಂದು ತೀರ್ಮಾನ ಮಾಡುತ್ತೀವಿ. ಸಾರಿಗೆ ಇಲಾಖೆಯ ಪ್ರಮುಖರ ಜೊತೆ ಇಂದು ಮಾತನಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಸಾರಿಗೆ ಅವ್ಯವಸ್ಥೆ ಜನರಿಗೆ ಸಮಸ್ಯೆ ಆಗಿದೆ. ರಾತ್ರಿ ಆದಂತಹ ಅನೇಕ ಅನುಮಾನಗಳ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರಿಸಲಾಗಿತ್ತು ಎಂದರು.
ಸರ್ಕಾರದ ನಿಲುವು ಏನೇ ಇದ್ದರೂ ಬಹುತೇಕ ಇಂದು ಮುಷ್ಕರ ಅಂತಿಮ ಘಟ್ಟಕ್ಕೆ ಬರಲಿದೆ. ಸರ್ಕಾರದ ಗೊಂದಲದ ನಿಲುವಿನಿಂದ ಮುಷ್ಕರ ಮುಂದುವರಿಸಬೇಕಾಯಿತು. ಈಗ ವೇದಿಕೆಯಲ್ಲಿ ಎಲ್ಲ ಸ್ಪಷ್ಟಪಡಿಸಲಾಗುತ್ತದೆ. ನೌಕರರೇ ಮುಖ್ಯವಾಗಿದ್ದು, ನಮ್ಮ ತೀರ್ಮಾನ ಇಂದೇ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.
ಸರ್ಕಾರ ಏನೇ ಮಾಡಲಿ, ಸರ್ಕಾರದ ಹಿತ ಮುಖ್ಯ. ನನ್ನ ಪ್ರತಿಷ್ಠೆ ಪ್ರಶ್ನೆ ಬೇಡ. ಸರ್ಕಾರವೇ ಗೆಲ್ಲಲಿ. ನೌಕರರ ಹಿತ ಕಾಯಿರಿ. ನೌಕರರಿಗೆ ಮುಷ್ಕರದ ಅವಶ್ಯಕತೆ ಇತ್ತು. ಸರ್ಕಾರದ ಗಮನಕ್ಕೆ ಬೇಡಿಕೆಗಳ ತರಲಾಗಿದೆ. ಸರ್ಕಾರಕ್ಕೆ ಸದ್ಯ ಎಲ್ಲ ಬೇಡಿಕೆ ಗಮನಕ್ಕೆ ಬಂದಿದೆ. ಸರ್ಕಾರದ ನಿಲುವಿಗೆ ನೌಕರರಿಗೆ ಖುಷಿ ಇಲ್ಲ ಎಂದು ಹೇಳಿದರು.
9 ಬೇಡಿಕೆ ಇತ್ಯಾದಿ ಬಗ್ಗೆ ತೀರ್ಮಾನ ವಿಚಾರಗಳಲ್ಲೂ ನ್ಯೂನತೆ ಇದೆ. ಈಗ ವೇದಿಕೆಯಲ್ಲಿ ತೀರ್ಮಾನ ಮಾಡುತ್ತೇವೆ. ಸರ್ಕಾರ ಲಿಖಿತವಾಗಿ ಎಲ್ಲ ಹೇಳಲಿ ಆಮೇಲೆ ತೀರ್ಮಾನ ಮಾಡುತ್ತೇವೆ. ನೆನ್ನೆಯಷ್ಟು ಬೆಂಬಲ ಇವತ್ತು ನೌಕರರಿಂದ ನಿರೀಕ್ಷೆ ಕಡಿಮೆ ಇದೆ. ಉಪವಾಸ ಸತ್ಯಾಗ್ರಹ ಮಾತ್ರ ಮುಂದುವರಿಯಲಿದೆ ಎಂದರು.