ಚಿಕ್ಕಮಗಳೂರು: ರಾಜ್ಯದ ಆರ್ಆರ್ ನಗರ ಹಾಗೂ ಶಿರಾ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆಯ ಪ್ರಚಾರ ರಂಗೇರಿದ್ದು, ನಾಯಕರು ಒಬ್ಬರಿಗೊಬ್ಬರು ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ಸಚಿವ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ ರವಿ, ಮುನಿರತ್ನ ಕ್ರಿಮಿನಲ್ ಹಿನ್ನೆಲೆಯವರು ಎಂದು ನಿನ್ನೆ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಿದ್ರೆ ಎರಡು ಬಾರಿ ಟಿಕೆಟ್ ಕೊಟ್ಟು ಶಾಸಕರನ್ನಾಗಿ ಮಾಡಿದ ಪಾರ್ಟಿ ಯಾವುದು?. ಅವರ ಪಕ್ಷದಲ್ಲಿದ್ರೆ ಸಂಭಾವಿತ, ಪಾರ್ಟಿ ಬಿಟ್ರೆ ಕ್ರಿಮಿನಲ್ಲಾ ಎಂದು ಪ್ರಶ್ನಿಸಿದರು.
2018ರ ಚುನಾವಣೆಯಲ್ಲಿ ಮುನಿರತ್ನ ಇಂದ್ರ, ಚಂದ್ರ, ದೇವೇಂದ್ರ ಎಂದಿದ್ರು. ಈಗ ಮುನಿರತ್ನ ಪಾರ್ಟಿ ಬಿಟ್ಟ ಕೂಡಲೇ ಬದಲಾಗ್ತಾರಾ?. ಮುನಿರತ್ನ ಅವರು ಸಿದ್ದರಾಮಯ್ಯ ಹಾಗೂ ಡಿಕೆಶಿ ಪರ ಮಾಡಿರೋ ಪ್ರಚಾರ ಸಂಬಂಧ ಸ್ವಲ್ಪ ಹಳೇ ವಿಡಿಯೋಗಳನ್ನು ತೆಗೆದು ನೋಡಿ ಎಂದು ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್ ಮುಂಬೈಗೆ ಹೋಗಿದ್ರಲ್ಲಾ ಏನಕ್ಕೆ ಹೋಗಿದ್ದರು?. ಮನವೋಲಿಸಿ ಕರೆ ತರ್ತೀನಿ ಅಂತ ತಾನೇ ಹೈಡ್ರಾಮ ಮಾಡಿ ಬಾಂಬೆಯಲ್ಲಿ ನಿಂತಿದ್ದು. ಇವರು ಸರಿ ಇಲ್ಲ ಅನ್ನೋದಾದ್ರೆ ಕರೆತರಲು ಯಾಕೆ ಹೋಗಿದ್ರು. ಎಲ್ಲಾ ಒಪ್ಪಿದ್ದಾರೆ, ನಿಮ್ಮನ್ನೇ ಮಂತ್ರಿ ಮಾಡ್ತೀವಿ ಬನ್ನಿ ಎಂದು ಸಿದ್ದರಾಮಯ್ಯ ಯಾಕೆ ಹೇಳಿದ್ರು. ಇದೀಗ ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ಬಿಜೆಪಿ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ಸಿ.ಟಿ ರವಿ ಕಿಡಿಕಾರಿದರು.