– ಕಾಂಗ್ರೆಸ್ಸಿನವರ ಸಹವಾಸ ಮಾಡಿದ್ದಕ್ಕೆ ಜನ ನನ್ನ ಒಪ್ಪಿಕೊಂಡಿಲ್ಲ
– ಶಿರಾ ಜನ್ರು ನನ್ಗೆ ವಿಷ ಕೊಡ್ತಿರೋ ಹಾಲು ಕೊಡ್ತಿರೋ
ತಮಕೂರು: ಬಿಜೆಪಿಯವರೂ ನನ್ನನ್ನು ಮುಖ್ಯಮಂತ್ರಿ ಮಾಡಲೂ ಮುಂದಾಗಿದ್ದರು ಕೇಂದ್ರದಿಂದ ನರೇಂದ್ರ ಮೋದಿಯವರೇ ಆಫರ್ ಮಾಡಿದ್ದರು ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ಹೇಳಿದ್ದಾರೆ.
ಇಂದು ತುಮಕೂರಿನ ಶಿರಾದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಷಣ ಮಾಡಿದ ಹೆಚ್ಡಿಕೆ, ಮೋದಿಯವರೇ ಮುಖ್ಯಮಂತ್ರಿಯಾಗಲು ನನಗೆ ಆಫರ್ ನೀಡಿ. ಐದು ವರ್ಷ ನಿನ್ನನ್ನು ಯಾರೂ ಟಚ್ ಮಾಡಲ್ಲ ಅಂದಿದ್ದರು. ಆದರೆ ಕಾಂಗ್ರೆಸ್ಸಿನವರ ಸಂಕುಚಿತ ಮನೋಭಾವದಿಂದ ರಾಜ್ಯದಲ್ಲಿ ದರಿದ್ರ ಸರ್ಕಾರ ಬಂದಿದೆ ಎಂದು ವಿಪಕ್ಷಗಳ ಮೇಲೆ ಕಿಡಿಕಾರಿದರು.
ತಹಶೀಲ್ದಾರ್ ಗುರುಮೂರ್ತಿಗೆ ಯಲಹಂಕದಲ್ಲಿ ಪೋಸ್ಟಿಂಗ್ ಮಾಡುವಂತೆ ನಾನು ಸಿಎಂ ಆದಾಗ ಹೇಳಿದ್ದರು. 1 ಕೋಟಿ ರೂ. ಲಂಚ ಕೊಡುವ ಆಮಿಷ ಒಡಿದ್ದರು. ನಾನು ಒಪ್ಪಿಕೊಂಡಿರಲಿಲ್ಲ. ಇಂದು ಬಿಜೆಪಿ ಅವರು ಆತನಿಗೆ ಪೋಸ್ಟಿಂಗ್ ಕೊಟ್ಟಿದ್ದಾರೆ. ಬಿಜೆಪಿಗೆ ಒಂದೂವರೆ ಕೋಟಿ ಪೇಮೆಂಟ್ ಆಗಿದೆ. ಅಲ್ಲಿಯ ಶಾಸಕರಿಗೆ 50 ಲಕ್ಷ ರೂ. ಹಣ ಹೋಗಿದೆ. ಇಂಥಹ ತಹಶೀಲ್ದಾರನ ಅಮಾನತಿಗೆ ಈಗ ಶಿಪಾರಸ್ಸು ಮಾಡಲಾಗಿದೆ. ಕೆ.ಆರ್.ಪೇಟೆಯಲ್ಲಿ ಗೆದ್ದಂತೆ ಇಲ್ಲೂ ಗೆಲ್ಲುತ್ತೇವೆ ಎಂದು ಬಂದಿದ್ದಾರೆ. ಲೂಟಿ ಸರ್ಕಾರದವರು ಶಿರಾ ಗೆಲ್ಲಲು ಮುಂದಾಗಿದ್ದಾರೆ ಎಂದು ಸಿಎಂ ಪುತ್ರ ವಿಜಯೇಂದ್ರಗೆ ಟಾಂಗ್ ನೀಡಿದರು.
ಕೆಲ ಕಾರಣಗಳಿಂದ ಕಾರ್ಯಕರ್ತರ ಸಭೆ ಮಾಡಲು ಆಗಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಬಹಳ ವೇಗದಲ್ಲಿ ಹೊರಟಿದೆ. ಸಭೆ ಸಮಾರಂಭ ಮಾಡಿದೆ. ಆದರೂ ಇದರಿಂದ ಕಾರ್ತಕರ್ತರು ಎದೆಗುಂದಬೇಕಿಲ್ಲ. ಈ ಕ್ಷೇತ್ರದ ಕಾಡುಗೊಲ್ಲರು ನನಗೆ ಸತ್ಕಾರ ನೀಡಿದ್ದಾರೆ. ನಾನು ಗ್ರಾಮ ವಾಸ್ತವ್ಯ ಮಾಡಿದ್ದು ಕಾಡುಗೊಲ್ಲರ ಮನೆಯಲ್ಲಿ ಎಂದು ಹೇಳುವ ಮೂಲಕ ಕಾಡುಗೊಲ್ಲರ ಮತ ಸೆಳೆಯುವಲ್ಲಿ ಕುಮಾರಸ್ವಾಮಿ ಗಮನಹರಿಸಿದರು.
ಕಳೆದ ವಿಧಾನಸಭೆ ಫಲಿತಾಂಶ ನೋಡಿ ರಾಜಕೀಯದಿಂದ ನಿರ್ಗಮಿಸಬೇಕು ಅಂದುಕೊಂಡೆ. ಆದರೆ ಕಾಂಗ್ರೆಸ್ಸಿನವರು ತರಾತುರಿಯಲ್ಲಿ ದೇವೇಗೌಡರಿಗೆ ಫೋನ್ ಮಾಡಿ ಕರೆದರು. ಆಗ ದೇವೇಗೌಡರು ಕುಮಾರಸ್ವಾಮಿ ಆರೋಗ್ಯ ಸರಿ ಇಲ್ಲ. ನಿಮ್ಮಲ್ಲಿ ಯಾರಿಗಾದರೂ ಮುಖ್ಯಮಂತ್ರಿ ಮಾಡಿ ಅಂದಿದ್ದರು. ಎಷ್ಟೇ ಹೇಳಿದರೂ ಕೇಳದೇ ನನಗೆ ಕಾಂಗ್ರೆಸ್ಸಿನವರೇ ಮುಖ್ಯಮಂತ್ರಿ ಪಟ್ಟ ಕಟ್ಟಿದರು. ನನಗೆ ಮುಖ್ಯಮಂತ್ರಿ ಆಗುವ ಆಸೆ ಇರಲಿಲ್ಲ ಎಂದು ಹೆಚ್ಡಿಕೆ ತಿಳಿಸಿದ್ದಾರೆ.
ಕಾಂಗ್ರೆಸ್ಸಿನವರ ಸಹವಾಸ ಮಾಡಿದಕ್ಕೆ ಜನ ನನ್ನ ಒಪ್ಪಿಕೊಂಡಿಲ್ಲ. ಅಷ್ಟೇ ಯಾಕೆ ನನ್ನ ಕಾರ್ಯಕರ್ತರೇ ಒಪ್ಪಿಕೊಂಡಿಲ್ಲ. ಶಿರಾ ಜನರು ನನಗೆ ವಿಷ ಕೊಡುತ್ತಿರೋ ಅಥವಾ ಹಾಲು ಕೊಡುತ್ತಿರೋ ನಿಮಗೆ ಬಿಟ್ಟಿದ್ದು. ಇಲ್ಲಿಂದ ಹೊಸ ರಾಜಕೀಯ ಆರಂಭವಾಗಬೇಕು. ಸರ್ಕಾದಲ್ಲಿ ದುಡ್ಡಿಗೆ ತೊಂದರೆ ಇಲ್ಲ. ರಾಜ್ಯ ಸಂಪದ್ಭರಿತವಾಗಿದೆ ಎಂದು ಕುಮಾರಸ್ವಾಮಿಯವರು ತಿಳಿಸಿದ್ದಾರೆ.